
• ಚಿ.ಗೋ ರಮೇಶ್
ಕನ್ನಡದ ಚಿತ್ರಗಳಿಗೆ ಶುಕ್ರದೆಸೆ ತಿರುಗಿದೆ. ಇದೀಗ ಆ ಸಾಲಿಗೆ “ಕಬ್ಜ” ಸೇರ್ಪಡೆಯಾಗಲು ಸಜ್ಜಾಗಿದೆ. ಜಗತ್ತಿನ 50ಕ್ಕೂ ಅಧಿಕ ದೇಶಗಳಲ್ಲಿ ಏಕಕಾಲಕ್ಕೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲು ಮುಹೂರ್ತ ನಿಗಧಿಯಾಗಿದೆ. ಜನರ ಹೃದಯ ಕಬ್ಜ ಮಾಡಲು ವೇದಿಕೆ ಸಿದ್ದಪಡಿಸಿಕೊಂಡಿದೆ.
ನಗುವಿನ ಒಡೆಯ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಚಿತ್ರ ದೇಶ ವಿದೇಶಗಳಲ್ಲಿ ಆರ್ಭಟಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಆರ್. ಚಂದ್ರು ಹುಟ್ಟೂರು ಶಿಡ್ಲಘಟ್ಟ ಜನತೆ ಮತ್ತು ಸಚಿವ ಡಾ.ಸುಧಾಕರ್, ಶಾಸಕ ವಿ.ಮುನಿಯಪ್ಪ, ಮಾಜಿ ಸಚಿವ ಎಚ್.ಎಂ ರೇವಣ್ಣ ಸೇರಿದಂತೆ ಮಾಜಿ ಶಾಸಕರು ಮತ್ತು ಸಿನಿಮಾ ಗಣ್ಯರ ಸಮ್ಮುಖದಲ್ಲಿ “ಚುಮ್ ಚುಮ್ ಚಳಿ ಚಳಿ” ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡಿಸಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ.
ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್,ಶ್ರೀಯಾ ಸರಣ್ ಸೇರಿದಂತೆ ಬಹು ತಾರಾಗಣ ಮತ್ತು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ “ಕಬ್ಜ” ಚಿತ್ರ ಭಾರತೀಯ ಚಿತ್ರರಂಗ ಮಾತ್ರವಲ್ಲ. ಜಗತ್ತನ್ನು ಕನ್ನಡದತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಲು ಮುಂದಾಗಿದ್ದಾರೆ.
ಈ ವೇಳೆ ಮಾತಿಗಿಳಿದ ನಟ ಉಪೇಂದ್ರ, ಪುನೀತ್ ರಾಜ್ಕುಮಾರ್ಗೆ ಸಿನಿಮಾ ನಿದೇಶನ ಮಾಡಬೇಕಾಗಿತ್ತು. ಅವಕಾಶ ಕಳೆದುಕೊಂಡೆ. ಈಗ ಶಿವಣ್ಣಗೆ ನಿರ್ದೇಶನ ಮಾಡುವೆ. ಇನ್ನು ಕಬ್ಜ ಚಿತ್ರದಲ್ಲಿ ಛಾಯಾಗ್ರಾಹಕ ಎಜೆ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಚಿತ್ರದ ನಿಜವಾದ ನಾಯಕರು,ಮಾಚ್ 17ರಂದು ಚಿತ್ರ ತೆರೆಗೆ ಬರಲಿದೆ.ಚಿತ್ರ ಎಲ್ಲರ ಹೃದಯ ಕಬ್ಜ ಮಾಡಲಿದೆ ಎಂದರು.
ನಟಿ ಶ್ರೀಯಾ ಸರಣ್, ಚಿತ್ರದ ಕಥೆ ಕೇಳಿದ ತಕ್ಷಣ ಪಾತ್ರವನ್ನು ಜೀವಿಸಿಬಿಟ್ಟಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ಶಿವಣ್ಣನ ನೋಡಿ ನಿರ್ದೇಶಕನಾದೆ
ನಮ್ಮೂರಿನ ಬಳಿಯ ನಂದಿಯಲ್ಲಿ ಶಿವರಾಜ್ ಕುಮಾರ್ ಅವರ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು ಅದನ್ನು ನೋಡಿ ನಾನು ನಿರ್ದೇಶಕನಾದೆ. ಅಲ್ಲದೆ ಶಿವಣ್ಣ ಅವರಿಗೂ ಚಿತ್ರ ನಿರ್ದೇಶನ ಮಾಡಿದೆ ಇದು ಖುಷಿಯ ಸಂಗತಿ. ಶಿವಣ್ಣ ಅವರ ಪ್ರೀತಿ ವಾತ್ಸಲ್ಯಕ್ಕೆ ಚಿರಋಣಿ. ನಮ್ಮ ಸಿನಿಮಾ ಸಂಸ್ಥೆಯನ್ನು ಗೀತಕ್ಕೆ ಆರಂಭ ಮಾಡಿಕೊಟ್ಟರು. ಅವರ ಆಶೀರ್ವಾದಿಂದ ಚಿತ್ರ ಕಬ್ಜದಂತದ ಪ್ಯಾನ್ ಇಂಡಿಯಾ ಚಿತ್ರ ಮಾಡಲು ಸಹಕಾರಿಯಾಗಿದೆ.
-ಆರ್ ಚಂದ್ರು, ನಿರ್ದೇಶಕ
ರೌಡಿಸಂಗೆ ಉಪ್ಪಿ ಓಂಕಾರ
ನಿರ್ದೇಶಕ ಉಪೇಂದ್ರ “ಓಂ” ಚಿತ್ರ ಮಾಡುವ ಮೂಲಕ ರೌಡಿಸಂಗೆ ಓಂಕಾರ ಹಾಕಿದ್ದಾರೆ. ಈ ಚಿತ್ರ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿತ್ತು.ಇದರಲ್ಲಿ ನಾನು ನಟಿಸಿದ್ದೆ ಎನ್ನುವುದು ಹೆಮ್ಮೆಯ ಸಂಗತಿ. ಉಪೇಂದ್ರ ನಿರ್ದೇಶನದ ಅಭಿಮಾನಿ .ನಿರ್ದೇಶಕ ಆರ್,ಚಂದ್ರು ಮೇಲಿನ ಅಭಿಮಾನ ಮತ್ತು ಉಪೇಂದ್ರ ಮೇಲಿನ ವಿಶ್ವಾಸ ಇಷ್ಟು ದೂರ ಬರುವಂತೆ ಮಾಡಿದೆ. ಚಂದ್ರು ಸಹೋದರನಿದ್ದಂತೆ. ಆತನ ನಿರ್ದೇಶನದಲ್ಲಿ ಮುಂದೆಯೂ ನಟಿಸುತ್ತೇನೆ. ತಂದೆ ತಾಯಿ ಮೇಲೆ ಚಂದ್ರು ಇಟ್ಟಿರುವ ಪ್ರೀತಿಯನ್ನು ಚಿತ್ರದಲ್ಲಿಯೂ ತೋರಿಸುತ್ತಾರೆ ಇದು ನನಗೆ ಇಷ್ಟ ಎಂದರು.
– ಶಿವರಾಜ್ ಕುಮಾರ್, ನಟ