ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕಲಬುರಗಿ:ಎ.9: ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ, ನಾಡು-ನುಡಿ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಶ್ರಮಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ರಗತಿಶೀಲ ಚಿಂತಕ, ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

    ನಗರದ ಮಹಾದೇವ ನಗರದಲ್ಲಿರುವ 'ಶಿವಾ ವಿದ್ಯಾ ಮಂದಿರ ಪ್ರೌಢಶಾಲೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಏರ್ಪಡಿಸಿಲಾಗಿದ್ದ 'ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣೋತ್ಸವ' ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತಿದ್ದರು.

ತೇಜಸ್ವಿಯವರು ನವ್ಯ ಸಾಹಿತ್ಯ ಉತ್ಕರ್ಷ ಸ್ಥಿತಿಯಲ್ಲಿದ್ದ ಕಾಲದಿಂದ ಬಂಡಾಯದ ಕಾಲಾವಧಿಯಲ್ಲಿ ಔದ್ಯಮಿಕ ಆವಿಷ್ಕಾರ, ಪ್ರಗತಿಗಳ ಆಸ್ಪೋಟನೆಯ ಹಿನ್ನಲೆಯಲ್ಲಿ ಸಮಾಜದ ನಿರ್ವೀರ್ಯ ಮೌಲ್ಯಗಳ ಪರಿಸರದಲ್ಲಿ ಅನನ್ಯ ಸಾಹಿತ್ಯ ಕಲೆಗಾರರಾಗಿ ಬೆಳೆದರು. ಅವರು ರಚಿಸಿರುವ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದಾಗಿದೆ. ಮೂಡನಂಬಿಕೆಗಳು, ಶೋಷಣೆಗಳು, ಸಭ್ಯತೆ ಸೋಗಿನ ಬಗೆಗೆ ಬಂಡಾಯದ ಅಂಶಗಳನ್ನು ಅವರು ರಚಿಸಿದ ನಾಟಕ ಹಾಗೂ ಕಥಾ ಸಾಹಿತ್ಯ ಕೃತಿಗಳಲ್ಲಿ ಕಂಡುಬರುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡುತ್ತಾ, ನಿಸರ್ಗ, ನಾಗರೀಕತೆ, ಮಾನವೀಯ ಮೌಲ್ಯಗಳು, ತತ್ವಜ್ಞಾನದ ಚಿಂತನೆಗಳುಳ್ಳ ತೇಜಸ್ವಿಯವರ ಬರಹಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನ ಮಾಡಿದರೆ ಶ್ರೇಷ್ಠ ನಾಗರಿಕರಾಗಲು ಪೂರಕವಾಗುತ್ತದೆ ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರೇಶ ಬೋಳಶೆಟ್ಟಿ ನರೋಣಾ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ ಹಾಗೂ ಶಿಕ್ಷಕರು ಇದ್ದರು.