
ಭಾಲ್ಕಿ:ಫೆ.26: ಕನ್ನಡ ಭಾಷೆಗೆ ಸಾವಿರಾರೂ ವರ್ಷಗಳ ಇತಿಹಾಸ ಇದೆ. ತನ್ನದೇ ಸಂಸ್ಕøತಿ, ಪರಂಪರೆ ಹೊಂದಿದೆ. ಕನ್ನಡ ಉಳಿದರೆ ಮಾತ್ರ ನಮ್ಮೆಲ್ಲರ ಉಳಿವು ಹಾಗಾಗಿ ಕನ್ನಡಿಗರಿಗೂ ಎಂದಿಗೂ ಕನ್ನಡತನ ಬಿಟ್ಟು ಕೊಡಬಾರದು ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ದೇಶಕ ಪೆÇ್ರೀ.ಬಿ.ಬಿ.ಪೂಜಾರಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ವಿರಕ್ತ ಮಠದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ದೇಶದಲ್ಲೇ ಅತ್ಯಂತ ಶ್ರೀಮಂತ ಭಾಷೆಯೆಂಬ ಹೆಗ್ಗಳಿಕೆ ಹೊಂದಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮದು. ಹಾಗಾಗಿ ಕನ್ನಡದ ಬಗ್ಗೆ ತಾತ್ಸಾರ ಭಾವನೆ ಸಲ್ಲದು. ಶರಣರು, ಸಾಹಿತಿಗಳು, ಕವಿಗಳು, ಲೇಖಕರು ಕನ್ನಡದ ಹಿರಿಮೆಯನ್ನು ಸಾರಿದ್ದಾರೆ. ಅದನ್ನು ಉಳಿಸಿ ಬೆಳೆಸಿ ಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಸಾಹಿತಿ ಸೋಮನಾಥ ನುಚ್ಚಾ ಧ್ವಜ ಹಸ್ತಾಂತರಿಸಿದರು.
ಸಾನ್ನಿಧ್ಯ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ ಹೋರಾಟದ ಫಲವಾಗಿ ಗಡಿಭಾಗ ಕನ್ನಡ ನೆಲದಲ್ಲಿ ಉಳಿದಿದೆ. ಇಂತಹ ಭೂಮಿಯಲ್ಲಿ ನಾವೆಲ್ಲರೂ ಇರುವುದು ನಮ್ಮಪುಣ್ಯ. ಬಸವಾದಿ ಶರಣರು ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡದ ಹಿರಿಮೆ ಗರಿಮೆಯನ್ನು ಸಾರಿಸಿದ್ದಾರೆ. ಅಂತಹ ಶ್ರೀಮಂತ ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಿಗೊಳಿಸುವ ಜಿಮ್ಮೆದ್ದಾರಿ ಎಲ್ಲರದ್ದಾಗಿದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಕನ್ನಡ ಅಭಿಮಾನ ಕೇವಲ ಸಮ್ಮೇಳನ, ಕಾರ್ಯಕ್ರಮಗಳಿಗೆ ಸೀಮಿತ ಆಗಬಾರದು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಕೊಡಿಸುವ ಸಂಕಲ್ಪ ಮಾಡಬೇಕು. ಜತೆಗೆ ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು. ಅಂದಾಗ ನಮ್ಮತನ ಉಳಿಯುತ್ತದೆ. ಕನ್ನಡ ಭಾಷೆ ಬೆಳವಣಿಗೆ ಆಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ವಿಕ್ರಮ ವಿಸಾಜಿ ಮಾತನಾಡಿ, ಗಡಿ ಜಿಲ್ಲೆ ಬೀದರ್ ಸಾಕಷ್ಟು ಪ್ರತಿಭಾವಂತ ಯುವ ಬರಹಗಾರರು, ಸಾಹಿತಿಗಳು ಇದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಿ ಬೆನ್ನುತಟ್ಟುವ ಕೆಲಸ ಆಗಬೇಕಿದೆ ನಮ್ಮ ತಂದೆಯವರು ಕನ್ನಡ ಪ್ರಾಧ್ಯಾಪಕರು ಆಗಿರುವ ಕಾರಣ ನನ್ನನ್ನು ಸಾಹಿತ್ಯ ಕ್ಷೇತ್ರ ಸೆಳೆಯಿತು. ಮತ್ತು ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ನಡೆಯುತ್ತಿದ್ದ ಶಿವಾನುಭವ ಗೋಷ್ಠಿ, ಪ್ರವಚನ ಸಾಕಷ್ಟು ಪ್ರಭಾವಿತನಾಗುವಂತೆ ಮಾಡಿತು. ಅಲ್ಲಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮಗಳು, ಸಮ್ಮೇಳನದಲ್ಲಿ ಬಾಗವಹಿಸುತ್ತಿದ್ದೆ. ಇದರಿಂದ ಬರೆಯುವ ಹವ್ಯಾಸ ಬೆಳೆಸಿಕೊಂಡೆ, ಸ್ಥಳೀಯ ಸಾಹಿತಿಗಳು, ಲೇಖಕರು ನನ್ನ ಸಾಹಿತ್ಯವನ್ನು ಪ್ರೋತ್ಸಾಹಿಸಿದರು. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಒಂದಷ್ಟು ಗಟ್ಟಿಯಾಗಿ ಸಾಹಿತ್ಯವನ್ನು ಬರೆಯಲು ಸಾಧ್ಯವಾಯಿತು. ಕನ್ನಡ ಸಮ್ಮೇಳನ, ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಕನ್ನಡದ ಭಾಷೆ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದ ಕನ್ನಡತನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಂದಾಯ ಇಲಾಖೆಯ ಶಿರೆಸ್ತೇದಾರ ಗೋಪಾಲ ಹಿಪ್ಪರಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಪ್ರಮುಖರಾದ ಮಹೇಶ ಪಾಟೀಲ್, ಮನೋಹರ ಹೋಳ್ಕರ್, ಮಲ್ಲಿಕಾರ್ಜುನ ಹಲ್ಮಂಡಗೆ, ಗುಂಡೇರಾವ ಪಾಟೀಲ್, ಶಾಂತಕುಮಾರ ಪ್ರಭಾ, ರಾಜಪ್ಪ ಪಾಟೀಲ್, ದತ್ತಾತ್ರಿ ಕಾಟಕರ್, ಹಣಂಮತರಾವ ಶ್ರೀಮಾಳೆ, ಮಲ್ಲಿಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ್, ಪ್ರಭುರಾವ ಪಾಟೀಲ್, ಮನೋಹರ್, ಎಂ.ಎಸ್.ಮನೋಹರ್, ವೀರಶೆಟ್ಟಿ ಬಾವುಗೆ, ಚಂದ್ರಕಲಾ ಡಿಗ್ಗೆ, ಸುನಿತಾ ಮಮ್ಮಾ, ಸಂತೋಷ ಬಿಜಿ ಪಾಟೀಲ್, ಅಕ್ಷಯ ಮುದ್ದಾ, ಚಿನ್ನಮ್ಮ ಬಾವುಗೆ ಸೇರಿದಂತೆ ಹಲವರು ಇದ್ದರು.
ಗಿಪ್ಸನ್ ಕೋಟೆ ತಂಡದವರು ನಾಡಗೀತೆ ನಡೆಸಿ ಕೊಟ್ಡರು. ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಮೇಶ ಚಿದ್ರಿ, ದೀಪಕ ಠಮಕೆ ನಿರೂಪಿಸಿದರು. ಹಣಮಂತ ಕಾರಾಮುಂಗೆ ವಂದಿಸಿದರು
ಗೊತ್ತುವಳಿ ಮಂಡನೆ
- ಬೆಳಗಾವಿಯಲ್ಲಿ ಸ್ಥಾಪಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ನಾಮಕರಣ ಮಾಡುವುದು.
- ಬೆಳಗಾವಿಯ ವಿಕಾಸ ಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಿಸುವುದು.
- ಭಾಲ್ಕಿ ಪಟ್ಟಣದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ, ಡಾ.ಜಯದೇವಿತಾಯಿ ಲಿಗಾಡೆ, ಪ್ರಭುರಾವ ಕಾಂಬಳಿವಾಲಾ, ರಾಯಕಾಶಿರಾಯ ದೇಶಮುಖ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡುವುದು.
- ಭಾಲ್ಕಿಯ ಎಲ್ಲ ವಲಯಗಳಲ್ಲಿ ಕಸಾಪ ಭವನಕ್ಕೆ ನಿವೇಶನ ಒದಗಿಸುವುದು.
- ಕನ್ನಡ ಮಾಧ್ಯಮದ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು.
6.ಪ್ರತಿಯೊಂದು ಹಳ್ಳಿಯಲ್ಲಿ ಗ್ರಂಥಾಲಯ ತೆರೆಯುವುದು.
- ಕನ್ನಡ ಶಿಕ್ಷಕರ ಕೊರತೆ ನೀಗಿಸುವುದು.
8.ಯುವ ಲೇಖಕರು, ಕವಿಗಳ ಹೊಸ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡುವುದು.
ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಸಮ್ಮೇಳನದ ಅಂಗವಾಗಿ ಹಲಬರ್ಗಾದಲ್ಲಿ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿವೈಎಸ್ಪಿ ಪೃಥ್ವಿಕ ಶಂಕರ್ ಅವರು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಡಾ.ವಿಕ್ರಮ ವಿಸಾಜಿ ದಂಪತಿ ಮತ್ತು ತಾಯಿ ಭುವನೇಶ್ವರಿಯ ಮೆರವಣಿಗೆ ಗ್ರಾಮದ ಮುಖ್ಯ ರಸ್ತೆ, ಬೀದಿಗಳಲ್ಲಿ ಸಂಭ್ರಮದಿಂದ ಸಾಗಿ ಶ್ರೀಮಠದಲ್ಲಿ ಸಮಾವೇಶಗೊಂಡಿತು.
ದಾರಿಯುದ್ದಕ್ಕೂ ಸಾಂಸ್ಕøತಿಕ ಹಿರಿಮೆಯನ್ನು ಸಾರುವ ಡೊಳ್ಳು ಕುಣಿತ, ಕೋಲಾಟ, ಲೇಜಿಮ್ ಸೇರಿ ಮುಂತಾದ ಜಾನಪದ ಕಲಾ ತಂಡಗಳು ಕಲೆ ಪ್ರದರ್ಶಿಸಿದವು. ಡಿಜೆ ಸೌಂಡ್ ಕನ್ನಡ ಗೀತೆಗಳಿಗೆ ಯುವಕರು ಹೆಜ್ಜೆ ಹಾಕಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ ಪ್ರಭಾ, ಧನರಾಜ ಪಾಟೀಲ್, ಸಂಜು ಪ್ರಭಾ, ಕಾಶಿನಾಥ ಲದ್ದೆ, ರಾಜಕುಮಾರ ಸಾಲಿ, ಸೋಮನಾಥ ಹೊಸಾಳೆ, ಶಿವಕುಮಾರ ಬಿರಾದಾರ್, ಸಂಗಮೇಶ ಜ್ಯಾಂತೆ, ಭದ್ರು ಪ್ರಭಾ, ಕುಪೇಂದ್ರ ಜಗಶೆಟ್ಟೆ, ಕಾಶಿನಾಥ ಚಲುವಾ, ಸುಭಾಷ ಹುಲಸೂರೆ, ಸಂಗಮೇಶ ಗುಮ್ಮೆ, ಗಣೇಶ ಪಾಟೀಲ್, ಸಂಗಮೇಶ ಭೂರೆ, ಅಶೋಕ ಬಾವುಗೆ, ರಾಜು ಕುಂಬಾರ, ಕೇಶವ ಶ್ರೀಮಾಳೆ, ದತ್ತಾತ್ರಿ ಪಾಟೀಲ್, ಪಿಂಟು ಠಾಕೂರ್, ರಾಜಕುಮಾರ ಚಲುವಾ, ರಾಜೇಂದ್ರ ಪಾಟೀಲ್, ಸಂತೋಷ ಹಡಪದ, ರೇವಣಪ್ಪ ಮೂಲಗೆ, ಚಂದ್ರಕಾಂತ ತಳವಾಡೆ, ಅಮರ ಪ್ರಭಾ, ಘಾಳೆಪ್ಪ ನಾಗೂರೆ, ಲಲಿತಾಬಾಯಿ ಪ್ರಭಾ, ಸರಸ್ವತಿ ಪ್ರಭಾ ಸೇರಿದಂತೆ ಮುಂತಾದವರು ಇದ್ದರು.