ಕಲಬುರಗಿ:ಎ.29: ಕವಿ, ಕಾದಂಬರಿಕಾರ, ಇತಿಹಾಸತಜ್ಞ, ವಾಗ್ಮಿ, ವಿಮರ್ಶಕ, ಶಿಕ್ಷಣ ತಜ್ಞ, ಪ್ರಾಂಶುಪಾಲ, ಉಪ ಕುಲಪತಿ, ಸಾಂಸ್ಕøತಿಕ ರಾಯಭಾರಿ, ಕನ್ನಡಪರ ಚಳುವಳಿಗಾರರಾಗಿ ಹೀಗೆ ಹಲವು ವಿಧಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿ, ಕನ್ನಡವನ್ನು ರಾಷ್ಟ್ರಮಟ್ಟಕ್ಕೇರಿಸಲು ಶ್ರಮಿಸಿದ ವಿ.ಕೃ.ಗೋಕಾಕರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ 'ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 'ವಿ.ಕೃ.ಗೋಕಾಕ್ರ 31ನೇ ಪುಣ್ಯಸ್ಮರಣೋತ್ಸವ' ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಗೋಕಾಕರ ಸಾಹಿತ್ಯ ಕೃಷಿಗೆ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹ ದೊರೆತಿದೆ. ವಿವಿಧ ದೇಶಗಳಿಗೆ ಭಾರತದ ರಾಯಭಾರಿಯಾಗಿ ತೆರಳಿ ನಮ್ಮ ನಾಡು, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. 'ನವ್ಯ'ತೆಗೆ ಬುನಾದಿ ಹಾಕಿದ್ದಾರೆ. 'ವಿನಾಯಕ' ಎಂಬ ಕಾವ್ಯನಾಮದಿಂದ ಅವರನ್ನು ಗುರುತಿಸಲಾಗುತ್ತದೆ. 'ಭಾರತ ಸಿಂಧು ರಶ್ಮಿ', 'ದ್ಯಾವಾ ಪ್ರಥ್ವಿ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಗೋಕಾಕರು, ನಾಡು, ನುಡಿ, ಜಲ, ಭಾಷೆಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಗೋಕಾಕ ಅವರ ವರದಿಯ ಫಲವಾಗಿ ನಮ್ಮ ನಾಡಿನಲ್ಲಿ ಕನ್ನಡೇತರ ಶಾಲೆಗಳಲ್ಲಿಯೂ ಮೂರನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಓದಬೇಕಾಗಿದೆ. ಗೋಕಾಕ ಚಳುವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡುತ್ತಾ, ಗೋಕಾಕರು ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಜನಸಾಮಾನ್ಯರು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಲು ಪ್ರೇರಣೆ ನೀಡಿದ್ದಾರೆ. ಗೋಕಾಕ ವರದಿ ಜಾರಿಗಾಗಿ ನಮ್ಮ ನಾಡಿನಲ್ಲಿ ಜರುಗಿದ ಕನ್ನಡ ಚಳುವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಇಂತಹ ಬೃಹತ ಪ್ರಮಾಣದ ಚಳುವಳಿ ಹಿಂದೆಂದೂ ಜರಗಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲಿ, ಕರ್ನಾಟಕದ ಏಕೀಕರಣ ಚಳುವಳಿಯಾಗಲಿ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳಿರುವುದನ್ನು ಗಮನಿಸಿದರೆ ಗೋಕಾಕರಿಗೆ ಕನ್ನಡವೇ ಉಸಿರಾಗಿತ್ತು ಎಂದು ತಿಳಿದುಬರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಡಾ.ಸತೀಸ್ ಟಿ.ಸಣಮನಿ, ದತ್ತು ಹಡಪದ, ಇಸ್ಮೈಲ್ ಅತ್ತರ್, ಸೂರ್ಯಕಾಂತ, ಸೌಂದರ್ಯ, ಆದಿತ್ಯ, ವಿಶ್ವ, ಗಣೇಶ, ಮಹೇಶ್, ಸಾಯಿ, ಅಮೂಲ್ ಸೇರಿದಂತೆ ಮತ್ತಿತರರಿದ್ದರು.