
ಕಲಬುರಗಿ:ಎ.22: ಕಥೆ, ಕಾದಂಬರಿ, ನಾಟಕ, ಸಂಪಾದನೆ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡುವ ಮೂಲಕ ತ.ರಾ.ಸುಬ್ಬರಾವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡುವ ಮೂಲಕ ಕನ್ನಡದ ದೊಡ್ಡ ಆಸ್ತಿಯಾಗಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ 'ಜ್ಞಾನ ಚಿಗುರು ಟ್ಯೂಟೋರಿಯಲ್ಸ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜರುಗಿದ 'ತ.ರಾ.ಸುಬ್ಬರಾವ್ರ ಜನ್ಮದಿನೋತ್ಸವ' ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ತ.ರಾ.ಸು ಅವರು ದೊಡ್ಡ ಪ್ರಮಾಣದಲ್ಲಿ ಜನರ ಪ್ರೀತಿ,ವಿಶ್ವಾಸ ಗಳಿಸಿದ್ದರು. ಪ್ರಗತಿಪರ ಚಿಂತಕರು ಆದ ತ.ರಾ.ಸು ಅವರು ಪತ್ರಿಕಾರಂಗದಲ್ಲಿಯೂ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. ಸಾಹಿತಿಗಳಾಗಿ, ವಾಗ್ಮಿಗಳಾಗಿ ಜನಪ್ರೀಯರಾಗಿದ್ದ ಅವರು, 61 ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ ಸೇರಿದಂತೆ ಮತ್ತಿತರರು ಇದ್ದರು.