
ಕಲಬುರಗಿ, ಮಾ.14:ಭಕ್ತಿ, ದಾಸೋಹ, ಸಾಮಾಜಿಕ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳು, ಭ್ರಾತೃತ್ವ, ವೈಚಾರಿಕತೆ, ಜೀವನ ಮೌಲ್ಯಗಳು ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ‘ಗುರುಮಹಾಂತ’ ಎಂಬ ಅಂಕಿತನಾಮದೊಂದಿಗೆ ತಾವು ರಚಿಸಿದ ತತ್ವಪದಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ನಾಡಿನ ದೊಡ್ಡ ತತ್ಪಪದಕಾರರಾದ ಕಡಕೋಳ ಮಾಡಿವಾಳೇಶ್ವರರ ಸಂದೇಶ, ಚಿಂತನೆ ಸಮಾಜಕ್ಕೆ ಸಾರ್ವಕಾಲಿಕ ಪ್ರಸ್ತುತವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆ, ಶಿವಾ ವಿದ್ಯಾ ಮಂದಿರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಕಡಕೋಳ ಮಡಿವಾಳೇಶ್ವರರ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡುತ್ತಾ, ಕನ್ನಡ ಸಾಹಿತ್ಯಕ್ಕೆ ತತ್ವಪದಗಳ ಕೊಡುಗೆ ಅನನ್ಯವಾಗಿದ್ದು, ಅದರಲ್ಲಿ ಕಡಕೋಳ ಮಡಿವಾಳೇಶ್ವರರು ಪ್ರಮುಖರಾಗಿದ್ದಾರೆ. ಅವರು ತತ್ಪಪದ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ ಎಣದು ನುಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಪ್ರೀತಿ ಜೆ.ಬಿರಾದಾರ, ಸ್ವಾತಿ ಆರ್.ಪವಾಡಶೆಟ್ಟಿ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, ರೋಹಿತ್ ಸಿ.ವೈ., ಶಿಲ್ಪಾ ಎಸ್.ಕೆ., ಮಾಯಾದೇವಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.