ಕಂದಾಯ ನ್ಯಾಯಾಲಯದಲ್ಲಿ ಪ್ರಕರಣ ವಿಲೇವಾರಿ ನಂತರ 15 ದಿನದಲ್ಲಿ ಆದೇಶ ಹೊರಡಿಸಲು ಸೂಚನೆ

ಕಲಬುರಗಿ,ಜು.31: ತಹಸೀಲ್ದಾರ, ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬಾಕಿ ಇರುವ ಆಸ್ತಿ, ಜಮೀನು ಪ್ರಕರಣಗಳು ವಿಚಾರಣೆ ಅಂತ್ಯವಾಗಿ ಪ್ರಕರಣ ವಿಲೇವಾರಿ ಮಾಡಿದ‌ ನಂತರ ನ್ಯಾಯಾಲಯದ ಆದೇಶ ಹೊರಡಿಸಲು ಬಹಳಷ್ಟು ದಿನದಿಂದ ಬಾಕಿ‌ ಇರುವುದನ್ನು ಗಮನಿಸಲಾಗಿದೆ. ವಿಚಾರಣೆ ಅಂತ್ಯವಾದಲ್ಲಿ ಮುಂದಿನ‌ 15 ದಿನದಲ್ಲಿ ಕಂದಾಯ ನ್ಯಾಯಾಲಯದ ಆದೇಶ‌ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಹಶೀಲ್ದಾರ ಮತ್ತು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದರು.

ಸೋಮವಾರ ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಆದೇಶ ಬಾಕಿ ಉಳಿಸಿಕೊಂಡಲ್ಲಿ ಮತ್ತೆ ಸಾರ್ವಜನಿಕರು ಕಚೇರಿಗೆ ತಿರುಗಾಡಬೇಕಿದೆ. ಇದು ಅನಗತ್ಯ ಕಿರಿಕಿರಿಗೆ ಅವಕಾಶ ಮಾಡಿಕೊಡುತ್ತದೆ. ಇದನ್ನು ತಪ್ಪಿಸಬೇಕು ಎಂದರು.

ಕಲಬುರಗಿ ವಿಭಾಗದಲ್ಲಿ ತಹಶೀಲ್ದಾರರ ಹಂತದಲ್ಲಿ 6 ತಿಂಗಳಿನಿಂದ 5 ವರ್ಷ ಮೇಲ್ಪಟ್ಟ 3,307 ಪ್ರಕರಣಗಳು ಬಾಕಿ ಇವೆ. ಕಾಲಂ‌ 6 ರಿಂದ‌ 10ರ ವರೆಗಿನ ಪ್ರಕರಣಗಳನ್ನು ತಹಶೀಲ್ದಾರರು ಆಂದೋಲನ ರೂಪದಲ್ಲಿ ಮುಂದಿನ 1 ತಿಂಗಳಿನಲ್ಲಿ ವಿಲೇವಾರಿಗೊಳಿಸಿ ಭೂಮಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಅದೇ‌ ರೀತಿ ಸಹಾಯಕ ಆಯುಕ್ತರು ತಮ್ಮ ಹಂತದಲ್ಲಿನ ಪ್ರಕರಣಗಳು ವಿಲೇವಾರಿ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ, ಕಂದಾಯ ನ್ಯಾಯಾಲಯ ಅದೇಶಗಳು ಸ್ಪಷ್ಟ ಮತ್ತು ಪ್ರಕರಣಗಳ ವಿಷಯಕ್ಕೆ ಸೀಮಿತವಾಗಿರಬೇಕು. ಅನಗತ್ಯ ರಾಮಾಯಣ ಇಲ್ಲಿ ಬೇಡ. ಕೆಲವೊಮ್ಮೆ ಈ ಆದೇಶಗಳು ಸಿವಿಲ್‌ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇರುವುದರಿಂದ‌ ನ್ಯಾಯಾಲಯಕ್ಕೆ ದಾಖಲೆಗಳು ಸಲ್ಲಿಸಬೇಕಾಗುತ್ತದೆ. ಹೀಗಾಗಿ ತಹಶೀಲ್ದಾರ, ಸಹಾಯಕ ಆಯುಕ್ತರು ಇಂತಹ ಪ್ರಕರಣಗಳ ದಾಖಲಾತಿಗಳನ್ನು ತಮ್ಮ‌ ಕಚೇರಿಯಲ್ಲಿ ಸರಿಯಾಗಿ ಇಟ್ಟುಕೊಳ್ಳಬೇಕು ಎಂದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಹಶೀಲ್ದಾರ ಕಚೇರಿಯಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವ ಬಗ್ಗೆ ವಿಚಾರಿಸಿದಾಗ, ಗುರುಮಟಕಲ್ ತಹಶೀಲ್ದಾರ ಮಾತನಾಡಿ, 2013 ರಿಂದ ಸುಮಾರು 85 ಪ್ರಕರಣಗಳ ಕಡತ ಕಚೇರಿಯಲ್ಲಿ ಲಭ್ಯ ಇಲ್ಲ. ಹೀಗಾಗಿ ಅವು ಬಾಕಿ ಇವೆ ಎಂದರು. ರಾಜೆಂದ್ರ ಕುಮಾರ ಕಠಾರಿಯಾ ಮಾತನಾಡಿ, ಕಡತ ಇಲ್ಲದಿರುವುದು ಗಂಭೀರ ವಿಷಯ. ಕೂಡಲೆ ಈ ಕುರಿತು 15 ದಿನದಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಒಂದು ವೇಳೆ ಹಿಂದಿನ ಅಧಿಕಾರಿ-ಸಿಬ್ಬಂದಿಗಳು ಕಡತ ಒಪ್ಪಿಸದಿದ್ದಲ್ಲಿ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದರು.

ಸುಳ್ಳು ದಾಖಲೆ ನೀಡಿ ನೊಂದಣಿ ಮಾಡಿಸಿದ ದಸ್ತಾವೇಜು ರದ್ದತಿಗೆ ಅವಕಾಶ

ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಕೊಟ್ಟಿ ದಾಖಲೆ‌ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಂಡು ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ಒದಗಿಸುವ ಕುರಿತು ಕಳೆದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಡ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಮುಂದಿನ 3-4 ತಿಂಗಳಲಿನಲ್ಲಿ ಗೆಜೆಟ್ ರೂಪದಲ್ಲಿ ಆದೇಶ ಹೊರಬೀಳಲಿದೆ. ಇದರಿಂದ ಕಂಡವರ ಅಸ್ತಿ ಕಬಳಿಸುವ ದಲ್ಲಾಳಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಹಿಂದೆಲ್ಲ ಸುಳ್ಳು ದಾಖಲೆ ಸೃಷ್ಠಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಿಕೊಂಡು ಆಸ್ತಿ ಕಬಳಿಕೆದಾರರು ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದರು. ವಿಜಯಪುರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ. ಸುಳ್ಳು ದಾಖಲೆಗಳ ನೋಂದಣಿ ಗೊತ್ತಾದ ನಂತರ ಆಸ್ತಿ ಮಾಲೀಕರು ಸಿವಿಲ್‌ ನ್ಯಾಯಲಯ, ಉಚ್ಛ ನ್ಯಾಯಾಲಯ, ಸುಪ್ರೀಂ ಕೋರ್ಟ್ ಹೀಗೆ 5-6 ವರ್ಷ ನ್ಯಾಯಾಲಯಕ್ಕೆ ತಮ್ಮ ಆಸ್ತಿಗೆ ಅನಗತ್ಯ ಪರದಾಡಬೇಕಿತ್ತು. ಜಿಲ್ಲಾ ನೊಂದಣಾಧಿಕಾರಿಗಳಿಗೆ ಸುಳ್ಳು ದಸ್ತಾವೇಜು ರದ್ದುಪಡಿಸುವ ಅಧಿಕಾರ‌ ನೀಡಿದ್ದರಿಂದ ಸಾರ್ವಜನಿಕರಿಗೆ ಮುಂದಿನ ದಿನದಲ್ಲಿ ತ್ವರಿತ ನ್ಯಾಯಲಯ ಸಿಗಲು ಅನುಕೂಲವಾಗಲಿದೆ‌ ಎಂದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ)‌ ವಿ. ರಶ್ಮಿ‌ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಭೂಮಾಪನ‌ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಸೇರಿದಂತೆ ವಿಭಾಗದ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು, ತಹಶೀಲ್ದಾರರು, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.