
ಕಲಬುರಗಿ:ಸೆ.16: ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಮೂಲಕ ಓಝೋನ ಪದರು ಸರ್ವ ಜೀವಿಗಳ ರಕ್ಷಾ ಕವಚವಾಗಿದೆ. ಇಂದು ಕೆಲವು ಕಾರಣಗಳಿಂದ ಇದು ಅಪಾಯವನ್ನು ಎದುರಿಸುತಿದ್ದು, ಅದರ ರಕ್ಷಣೆ ಮಾಡುವ ಮೂಲಕ ಜೀವ ಸಂಕುಲದ ಉಳಿವು ಸಾಧ್ಯವಿದೆ ಎಂದು ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಅಭಿಮತ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಭೌತಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಓಝೋನ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಓಝೋನ್ ಪದರು ನಾಶವಾಗಿ ನೇರಳಾತೀತ ಕಿರಣಗಳು ಮಾನವನಿಗೆ ತಾಕಿದರೆ ಚರ್ಮರೋಗ, ಕಣ್ಣಿನ ದೋಷ, ಗಂಟಲಿನಲ್ಲಿ ಕೆರೆತ, ಕ್ಯಾನ್ಸರ್, ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ದಟ್ಟವಾದ ಹೊಗೆ ಹೊರಹಾಕುವ ವಾಹನಗಳ ಬಳಕೆಯನ್ನು ತಗ್ಗಿಸಬೇಕು. ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವುದು, ಎಲ್ಲೆಡೆ ವ್ಯಾಪಕವಾಗಿ ಗಿಡ-ಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್, ರೇಣುಕಾ ಚಿಕ್ಕಮೇಟಿ, ಮಲ್ಲಿಕಾರ್ಜುನ ದೊಡ್ಡಮನಿ, ಶಮೀನಾ ಬೇಗಂ, ಸಾಹೇಬಗೌಡ ಪಾಟೀಲ, ನಾಗಮ್ಮ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಸೇವಕ ಭಾಗಣ್ಣ ಹರನೂರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.