
ಹುಬ್ಬಳ್ಳಿ,ಮಾ15: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಕ್ಕೂಟ ವ್ಯವಸ್ಥೆಗೆ ಅದರದೇ ಆದ ಗೌರವವಿದೆ, ಆದರೆ ಮಹಾರಾಷ್ಟ್ರ ಸರ್ಕಾರ ಈ ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದ ಗಡಿಭಾಗದ ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ, ಇಷ್ಟೆಲ್ಲ ಬೆಳವಣಿಗೆ ಆದರೂ ರಾಜ್ಯ ಸರ್ಕಾರ ಸುಮ್ಮನೆ ಇರುವುದು ನೋಡಿದ್ರೆ ಸರ್ಕಾರ ಸತ್ತು ಹೋಗಿದೆ ಅನಿಸುತ್ತಿದೆ, ಕೂಡಲೇ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1966 ರಲ್ಲಿಯೇ ಗಡಿ ವಿಷಯದಲ್ಲಿ ಮಹಾಜನ್ ಆಯೋಗವನ್ನು ನಮ್ಮ ರಾಜ್ಯ ಒಪ್ಪಿಕೊಂಡಿದೆ. ಆದರೆ ಮಹಾರಾಷ್ಟ್ರದವರು ಮಾತ್ರ ಮೇಲಿಂದಮೇಲೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಲೇ ಬಂದಿದ್ದಾರೆ. ಇದೀಗ ಮತ್ತೇ ಕರ್ನಾಟಕದ 866 ಹಳ್ಳಿಗಳನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಿದೆ. ಇದಕ್ಕೆ ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ಘೋಷಣೆ ಮಾಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮ್ಮನೆ ಇದ್ದು, ರಾಜ್ಯದ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆಯಾ? ಎಂದು ಪ್ರಶ್ನೆ ಮಾಡಿದರು.
ಮಹಾರಾಷ್ಟ್ರದಲ್ಲಿಯೂ ಕನ್ನಡಿಗರು ಇದ್ದಾರೆ. ಅವರು ನಮ್ಮ ರಾಜ್ಯಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಆದರೆ ನಾವು ಮಹಾರಾಷ್ಟ್ರದಲ್ಲಿ ಹೋಗಿ ಕಾರ್ಯಕ್ರಮ ಮಾಡಲು ಆಗುತ್ತಾ ಎಂದ ಅವರು, ಇದು ಒಕ್ಕೂಟದ ವ್ಯವಸ್ಥೆ ಲಕ್ಷಣವಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಬರಬೇಡಿ ಎಂದು ನಾನು ಹೇಳಿಲ್ಲ. ರಾಜ್ಯದಲ್ಲಿ ಈ ಹಿಂದೆ ಪ್ರವಾಹ ಬಂದಾಗ ಕೊರೋನಾ ಹಾವಳಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿಗೆ ಬರಲಿಲ್ಲ. ಜನರ ನೋವು ಕೇಳಲಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧಿಕಾರ ಪಡೆಯಲು ಮತಕೇಳಲು ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ರೋಡ್ ಶೋ ಮಾಡತ್ತಾರೆ. ನಾವು ಮಾಡಿದ ಕಾರ್ಯಕ್ರಮ ಉದ್ಘಾಟನೆ ಮಾಡತ್ತಾರೆಂದು ಅವರು ವ್ಯಂಗ್ಯವಾಡಿದರು.
ನಮ್ಮ ಸರ್ಕಾರವಿದ್ದಾಗ ರೈತರ ಸಾಲ ಮನ್ನಾ ಸೇರಿದಂತೆ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇವೆ 5 ವರ್ಷದಲ್ಲಿ 5 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೇವೆ. ಆದರೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ನಾವು ಮಂಜೂರು ಮಾಡಿದ ಮನೆಗಳಿಗೆ ದುಡ್ಡು ಕೊಡೋಕೆ ಆಗಲಿಲ್ಲ ಅವರಿಗೆ ಎಂದು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್, ಮುಖಂಡರಾದ ಅನಿಲಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರು, ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ, ಕೆ.ಎನ್.ಗಡ್ಡಿ, ಸದಾನಂದ ಡಂಗನವರ ಮತ್ತಿತರರು ಉಪಸ್ಥಿತರಿದ್ದರು.