
ಬೆಂಗಳೂರು, ಮೇ.೨೫-ದೊಡ್ಡಬಳ್ಳಾಪುರದ ಮುತ್ಯಾಲಮ್ಮ ಜಾತ್ರೆಯಲ್ಲಿ ಏರ್ ಬಲೂನ್ ಜಂಪಿಂಗ್ ಆಟವಾಡುತ್ತಿದ್ದ ಬಾಲಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ. ಬಾಲಕನ ಸಾವಿನಿಂದಾಗಿ ಜಾತ್ರೆಯ ಆಯೋಜಕರ ಮೇಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬವರ ಪುತ್ರ ಶ್ರೇಯಸ್ (೧೧) ಮೃತ ಬಾಲಕ. ಮಂಜುನಾಥ್ ಅವರು ಕುರುಕಲು ಅಂಗಡಿ ನಡೆಸುತ್ತಿದ್ದಾರೆ. ಶ್ರೇಯಸ್ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ ತನ್ನ ತಾಯಿ ಜೊತೆಗೆ ಎರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿದ್ದ.ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗಾಗಿ ಹಾಕಲಾಗಿರುವ ವಿವಿಧ ಆಟಗಳಲ್ಲಿ ತೊಡಗಿದ್ದ. ಏರ್ ಬಲೂನ್ ಜಂಪಿಂಗ್ ಮಾಡುತ್ತಿದ್ದಾಗ ಶ್ರೇಯಸ್ಗೆ ಹೃದಯಾಘಾತವಾಗಿದೆ. ನಿತ್ರಾಣಗೊಂಡು ಅಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಬರಿಗೊಂಡ ತಾಯಿ ಮತ್ತು ಜನರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿದ್ದನ್ನು ವೈದ್ಯರು ತಿಳಿಸಿದ್ದಾರೆ.
ಪೋಷಕರ ಆರೋಪ: ಜಾತ್ರೆ ಪ್ರತಿ ವರ್ಷದಂತೆ ಕಳೆದ ೨ ದಿನಗಳಿಂದ ಅದ್ಧೂರಿಯಾಗಿ ಜರುಗುತ್ತಿದೆ. ಜಾತ್ರೆಯಲ್ಲಿ ಮನೋರಂಜನೆಗಾಗಿ ಹಲವು ವಿಧದ ಆಟಗಳನ್ನು ಹಾಕಲಾಗಿದೆ. ಏರ್? ಬಲೂನ್? ಜಂಪಿಂಗ್? ವೇಳೆ ಬಾಲಕ ಮೃತಪಟ್ಟಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಾತ್ರಾ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಸಾವಿರಾರು ಜನ ಸೇರುವ ಜಾತ್ರೆಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಅಯೋಜಕರು ಮಾಡಿಲ್ಲ. ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ಸಿಗದ ಹಿನ್ನೆಲೆ ನಮ್ಮ ಪುತ್ರ ಸಾವನ್ನಪ್ಪಿದ್ದಾನೆ” ಎಂದು ಪೋಷಕರು ಆರೋಪಿಸಿದ್ದಾರೆ.
ಜಾತ್ರಾ ಸೇವಾ ಸಮಿತಿಯ ನಿರ್ಲಕ್ಷ್ಯವೇ ತಮ್ಮ ಮಗನ ಸಾವಿಗೆ ಕಾರಣ. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳವನ್ನು ನಿಯೋಜನೆ ಮಾಡಬೇಕಿತ್ತು. ಘಟನೆ ನಡೆದ ತಕ್ಷಣವೇ ಬಾಲಕನಿಗೆ ಪ್ರಥಮ ಚಿಕಿತ್ಸೆ ಸಿಕ್ಕಿದ್ದರೆ ಆತ ಬದುಕುಳಿಯುವ ಸಾದ್ಯತೆ ಇತ್ತು. ಜಾತ್ರೆಯ ಆಯೋಜಕರು ಕೇವಲ ಹಣದ ಆಸೆಗಾಗಿ ವಿವಿಧ ಆಟಗಳಿಗೆ ಅನುಮತಿ ನೀಡಿದ್ದಾರೆ, ವಿನಹಃ ಜನರ ರಕ್ಷಣೆಗೆ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.