
ಭಾಲ್ಕಿ:ಸೆ.9: ಜೀವವಿಮಾ ಕಂಪನಿಗೆ ಪ್ರತಿನಿಧಿಗಳೇ ಜೀವಾಳವಾಗಿದ್ದಾರೆ ಎಂದು ಭಾರತೀಯ ಜೀವ ವಿಮಾ ನಿಗಮದ ಭಾಲ್ಕಿ ಶಾಖಾ ವ್ಯವಸ್ಥಾಪಕ ವಿಜಯಕುಮಾರ ಅಫ್ಜಲ್ಪುರ್ಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಅಡತ್ ಮಾರುಕಟ್ಟಯ ಹತ್ತಿರದ ಭಾರತೀಯ ಜೀವವಿಮಾ ನಿಗಮ ಶಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಜೀವ ವಿಮಾ ನಿಗಮದ 67ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಐಸಿಯು 1856ರ ಜೂನ್ ತಿಂಗಳಲ್ಲಿ ಭಾರತದ ಸಂಸತ್ತಿನಲ್ಲಿ ಲೈಫ್ ಇನ್ಸುರೆನ್ಸ್ ಆಫ್ ಇಂಡಿಯಾ ಕಾಯಿದೆ ಅಂಗೀಕರಿಸಿದ ನಂತರ, 1956 ರ ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಪೋರೇಟ್ ಸಂಸ್ಥೆಯಾಗಿ ತನ್ನ ಕಾರ್ಯಾಚರಣೆ ಆರಂಭಿಸಿತು. 1956ರ ಜುಲೈ ತಿಂಗಳಲ್ಲಿ ಎಲ್ಐಸಿ ಕಾಯಿದೆ ಜಾರಿಗೆ ಬಂತು. ಇದು ಭಾರತದಲ್ಲಿ ಖಾಸಗಿ ವಿಮಾ ಉದ್ಯಮದ ರಾಷ್ಟ್ರೀಕರಣಕ್ಕೆ ಸಹಾಯ ಮಾಡಿತು. ಅದರಂತೆ 154 ಜೀವವಿಮಾ ಕಂಪನಿಗಳು, 16 ವಿದೇಶಿ ವಿಮಾ ಕಂಪನಿಗಳು ಮತ್ತು 75 ಪ್ರಾವಿಡೆಂಟ್ ಕಂಪನಿಗಳನ್ನು ವಿಲೀನಗೊಳಿಸಿ ಭಾರತೀಯ ಜೀವವಿಮಾ ನಿಗಮವನ್ನು ರಚಿಸಲಾಯಿತು. ಇದರಿಂದ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವುದರೊಂದಿಗೆ ಲಕ್ಷಾಂತರ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸಲಾಯಿತು. ಪ್ರತಿನಿಧಿಗಳಿಗೆ ತಾವು ಮಾಡುವ ಜೀವವಿಮಾ ಪಾಲಿಸಿಗೆ ಶೇಕಡಾವಾರು ಹಣ ನೀಡುವುದರೊಂದಿಗೆ ಅವರಿಗೂ ಉದ್ಯೋಗ ನೀಡಿದಂತಾಯಿತು. ಹೀಗಾಗಿ ಜೀವವಿಮಾ ಕಂಪನಿಯಲ್ಲಿ ಪ್ರತಿನಿಧಿಗಳೇ ಕಂಪನಿಯ ಜೀವಾಳವಾಗಿ ಕಾರ್ಯನಿರ್ವಸುತ್ತಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಎಲ್ಐಸಿ ಪ್ರತಿನಿಧಿಗಳು ಜೇನು ಗೂಡಿನಂತೆ ಕಾರ್ಯನಿರ್ವಹಿಸುವರು. ಜೇನು ನೊಣಗಳು ಒಟ್ಟಾಗಿ, ಎಲ್ಲಾ ಕಡೆಯ ಮಕರಂದವನ್ನು ಹೀರಿ ಒಟ್ಟುಗೂಡಿಸಿ ಸಹಿಯಾದ ಜೇನು ತಯ್ಯಾರಿಸುವಂತೆ ಕಾರ್ಯ ನಿರ್ವಹಿಸುತ್ತಾರೆ. ಪಾಲಿಸಿದಾರರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ಅವರ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುರು. ದೇಶದ ಅತಿದೊಡ್ಡ ಕಾರ್ಪೋರೇಟ್ ಕಂಪನಿಯಾದ ಎಲ್ಐಸಿಯು ಭಗವದ್ಗೀಯತೆಯ ಶ್ಲೋಕ್ ಯೋಗಕ್ಷೇಮಮ್ ವಾಹಾಮ್ಯಹಂ ಎನ್ನುವಂತೆ ಎಲ್ಲರ ಯೋಗಕ್ಷೇಮಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. ಭಾರತೀಯ ಆರ್ಥಿಕತೆಯಲ್ಲಿಯೂ ಎಲ್ಐಸಿ ಬಹುದೊಡ್ಡ ಪಾತ್ರ ಹೊಂದಿದೆ, ಭಾರತ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಹೂಡಿಕೆ ನಿಗಮ ಇದಾಗಿದೆ ಎಂದು ಹೇಳಿದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿ ಸಂಗಮೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಗಮದ ನೂತನ ಡಿ.ಓ ವಿಷ್ಣುವರ್ಧನ ಎಲ್ಐಸಿ ಅಭಿವೃದ್ದಿಯಲ್ಲಿ ಪ್ರತಿನಿಧಿಗಳ ಪಾತ್ರದ ಬಗ್ಗೆ ಮಾತನಾಡಿದರು. ಪ್ರತಿನಿಧಿ ವೀರಭದ್ರ ಬಿರಾದಾರ ಜೀವವಿಮಾ ನಿಗಮದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿನಿಧಿ ಸುಭಾಷಚಂದ್ರ ದಾಡಗೆ, ಶಶಿಕಾಂತ ಅಷ್ಟೂರೆ, ಸುನೀಲ ಬೆಲ್ಲಾಳೆ, ಬಸವರಾಜ ಹಡಪದ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಪರಸಣೆ, ಮಲ್ಲಿಕಾರ್ಜುನ, ಅನೀಲಕುಮಾರ ಬಾಬುರಾವ ಕಳಸೆ, ರಾಮಘೋರವಾಡೆ ಉಪಸ್ಥಿತರಿದ್ದರು.ವೀರಭದ್ರ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು. ಆರ್.ಎಮ್.ಸಜ್ಜನ ವಂದಿಸಿದರು.