ಎಲ್ಲಾ ಜಿಲ್ಲೆಗಳಲ್ಲಿ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಘಟಕ ರಚನೆ; ಚನ್ನವೀರಸ್ವಾಮಿ ಹಿರೇಮಠ

ದಾವಣಗೆರೆ.ಜೂ.೧೫: ‘ನಗರದಲ್ಲಿ ಶಾಸ್ತ್ರೀಯ ಸಂಗೀತದ ಬೃಹತ್‌ ಕಾರ್ಯಕ್ರಮ ನಡೆಸಲು ಸಂಕಲ್ಪ ಮಾಡಿದ್ದೇವೆ’ ಎಂದು ಗದಗದ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.ಜಯದೇವ ವೃತ್ತದ ಶಿವಯೋಗ ಮಂದಿರದಲ್ಲಿ  ಹಮ್ಮಿಕೊಂಡಿದ್ದ ಸಮಿತಿಯ ಜಿಲ್ಲಾ ಘಟಕ, ಮಹಿಳಾ ಘಟಕ, ಗುರು ಸೇವಾ ದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಗಾನಯೋಗಿ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಪರಿಗಣಿಸಿ ದೊಡ್ಡ ಮ‌ಟ್ಟದಲ್ಲಿ ಘರಾಣಾ ಸಂಗೀತದ ಕಾರ್ಯಕ್ರಮ ನಡೆಸಲು ಯೋಜಿಸಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.ಎಲ್ಲಾ ಜಿಲ್ಲೆಗಳಲ್ಲಿ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಘಟಕಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಪುಟ್ಟರಾಜ ಗವಾಯಿಗಳ ಸಂಗೀತ ಹಾಗೂ ಅವರ ಕುರಿತ ‘‍ಪುಟ್ಟರಾಜು ವಚನ ಪ್ರಭಾ’ ಎಂಬ ಪುಸ್ತಕ ಹೊರತಂದಿದ್ದು, ಅದನ್ನು  ಎಲ್ಲರ ಮನೆಗಳಿಗೆ ತಲುಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.ದಾವಣಗೆರೆ ನಗರ ‘ದಾನದ ಕೆರೆ’. ಇಲ್ಲಿನ ದಾನಿಗಳು ಪುಟ್ಟರಾಜ ಗವಾಯಿಗಳ ಕುರಿತ ಎಲ್ಲ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ. ಗದಗದ ನಂತರ 2ನೇ ವೀರೇಶ್ವರ ಪುಣ್ಯಾಶ್ರಮ ಇಲ್ಲಿದೆ. ಅದರ ಶಿಲಾ ಸೌಂದರ್ಯ ಗಮನ ಸೆಳೆಯುತ್ತದೆ. ಅದಕ್ಕೆ ಇಲ್ಲಿನ ಭಕ್ತರ ಸಹಕಾರ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪಂಡಿತ ಪುಟ್ಟರಾಜ ಗವಾಯಿಗಳನ್ನು ನೆನೆಯುವುದು ಎಂದರೆ ಸಂಗೀತ ಲೋಕವನ್ನೇ ಸ್ಮರಿಸಿದಂತೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತೆ ಅವಲೋಕನ ಮಾಡಲು ಅವಕಾಶ ಸಿಕ್ಕಿದಂತೆ. ಅಂಧ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬಿದಂತೆ. ಇಡೀ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ನೆಲದ ಸಂಸ್ಕೃತಿಯನ್ನು ನೆನೆದಂತೆ’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವಿಶ್ಲೇಷಿಸಿದರು.ವರ್ತಕ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಥಣಿ ವೀರಣ್ಣ, ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌, ಸಂಗೀತ ಶಿಕ್ಷಕ ಶಿವಬಸಯ್ಯ ಚರಂತಿಮಠ, ಆನಂದ್‌ ಆರ್‌. ಪಾಟೀಲ್‌, ಸಮಿತಿ ಜಿಲ್ಲಾಧ್ಯಕ್ಷ ವಿನಾಯಕ ಪಿ.ಬಿ., ಮಹಿಳಾ ಘಟಕದ ಸೌಮ್ಯ ಸತೀಶ ಇದ್ದರು.ಪುಟ್ಟರಾಜು ವಚನ ಪ್ರಭಾ’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಕಲಾವಿದೆ ಸುಪ್ರೀತಿ ಭರತನಾಟ್ಯ ಪ್ರದರ್ಶಿಸಿದರು.