ಎನ್.ಪಿ.ಎಸ್ ರದ್ದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ : ಸಿಎಂ

ಬೆಂಗಳೂರು, ಜೂನ್ 13- ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆವರು ಈ ಭರವಸೆ ನೀಡಿದ್ದಾರೆ.
ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನೌಕರರು ಕೆಲಸ ಮಾಡಬೇಕು . ಪ್ರಾಮಾಣಿಕವಾಗಿ ಕಾರ್ಯಕ್ರಮ ಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ಅವರು ಮಾತನಾಡಿ, 1.4.2006 ರಲ್ಲಿ ಎನ್.ಪಿ.ಎಸ್ ಜಾರಿಯಾಗಿದೆ. 2.98 ಲಕ್ಷ ನೌಕರರು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಪಿಂಚಣಿ ಮೊತ್ತವನ್ನು ಎನ್.ಎಸ್.ಡಿ.ಎಲ್ ನಲ್ಲಿ ಠೇವಾಣಿ ಇಡಲಾಗಿದೆ. ಈ ಮೊತ್ತ ಬಳಕೆ ಮಾಡಿ ಇವರು ನಿವೃತ್ತಿಯಾಗುವ ವೇಳೆಗೆ ಲಭ್ಯವಾಗು ವಂತೆ ಜಿ.ಪಿ.ಎಫ್ ನಲ್ಲಿ ಇಡಬಹುದು. ವೋಟ್ ಫಾರ್ ಒ.ಪಿ.ಎಸ್ ನಲ್ಲಿ ಭಾಗಿಯಾದವರ ಮೇಲೆ ಕೈಗೊಂಡಿರುವ ಶಿಸ್ತಿನ ಕ್ರಮ ಕೈಬಿಡುವ ಕುರಿತು ಸರ್ಕಾರ ತೀರ್ಮಾನಿಸಬೇಕು ಎಂದು ವಿವರಿಸಿದರು.
ರಾಜಾಸ್ತಾನ, ಛತ್ತೀಸ್ ಗಡದಲ್ಲಿ ಎನ್.ಪಿ.ಎಸ್ ರದ್ದಾಗಿದ್ದು, ಕರ್ನಾಟಕದಲ್ಲಿಯೂ ಅದನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಎನ್.ಪಿ.ಎಸ್ ರದ್ದು ಮಾಡುವುದರಿಂದ ಯೋಜನೆಯಡಿ ಲಭ್ಯವಿರುವ ಒಟ್ಟು 19 ಸಾವಿರ ಕೋಟಿ ಹಣವನ್ನು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ದೊರೆಯಲಿದೆ. ನೌಕರರ ಪಾಲಿನ 9 ಸಾವಿರ ಕೋಟಿ ಜಿಪಿಎಫ್ ಗೆ ಪರಿವರ್ತನೆ ಮಾಡಿಕೊಳ್ಳುಬಹುದು ಹಾಗೂ ಸರ್ಕಾರದ 10 ಸಾವಿರ ಕೋಟಿ ರೂ.ಗಳು ಸರ್ಕಾರದ ಪಾಲನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ ತಿಳಿಸಿದರು.
ಮಾಜಿ ಸಚಿವ ವಿ.ಎಸ್.ಉಗ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆ.ಪಿ.ಟಿ.ಸಿಎಲ್, ಆರೋಗ್ಯ, ಜಲಮಂಡಳಿ, ಕಂದಾಯ ಇಲಾಖೆ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.