
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೬: ಸಾಮಾನ್ಯವಾಗಿ ಜನರು ಅಮೆರಿಕಾದಲ್ಲಿನ ಸೇತುವೆಯೊಂದರ ಕೆಳಗೆ ಇಂಡಿಯಾ ಎಂಬ ಇಂಗ್ಲೀಷ್ ಅಕ್ಷರದ ನಾಲ್ಕು ಪದಗಳನ್ನು ತೆಗೆದರೆ ಆ ಸೇತುವೆ ಉರುಳುತ್ತದೆ ಹಾಗೆ ಸರ್ ಎಂ.ವಿ. ವಿಶ್ವೇಶ್ವರಯ್ಯನವರು ಈ ಸೇತುವೆ ಕಟ್ಟಿದ್ದಾರೆ ಎಂಬ ಮಾತಗಳನ್ನಾಡುವುದನ್ನು ನಾವೆಲ್ಲ ಕೇಳಿದ್ದೀವಿ. ಆದರೆ ಇಂತಹ ಎಂಜಿನಿಯರ್ಗಳನ್ನು ತಯಾರು ಮಾಡುವ ವ್ಯಕ್ತಿಗಳನ್ನು ಎಂಜಿನಿಯರ್ಸ್ ಡೇ ದಿನ ನೆನಸಿಕೊಳ್ಳಲೇಬೇಕು. 2004 ರ ಸುಮಾರು, ಬೆಣ್ಣೆ ನಗರಿಯಲ್ಲಿ ಜಿಎಂಐಟಿ ಎಂಜಿನಿಯರ್ ಕಾಲೇಜ್ನದ್ದೇ ಸದ್ದಾಗಿತ್ತು. ಆಗ ಅಷ್ಟೊಂದು ದಾವಣಗೆರೆ ಬೆಳೆದಿರಲಿಲ್ಲ, ಆದರೂ ಅನೇಕರು ತಮ್ಮ ಮಕ್ಕಳಿಗೆ ವಿಶ್ವೇಶ್ವರಯ್ಯನವರನ್ನು ತೋರಿಸಿ, ಆ ಸಾಹೇಬ್ರು ಎಂಜಿನಿಯರ್ ಓದವ್ರಂತೆ. ನೀವೂ ಹಂಗೇ ಇಸ್ಕೂಲ್ ಕಲೀಬೇಕು, ಅಂತ ಹೇಳುತ್ತಿದ್ದರಂತೆ. ಹಾಗೆಯೇ ಇಂದು ಇವರ ಕೈಯಲ್ಲಿ ಸಾವಿರಾರು ಎಂಜಿನಿಯರ್ಗಳು ಅರಳಿದ್ದಾರೆ. ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಟಿ.ಆರ್. ತೇಜಸ್ವಿ ಕಟ್ಟಿಮನಿಯೇ ಸಾಕಷ್ಟು ಎಂಜಿನಿಯರ್ಗಳನ್ನು ತಯಾರು ಮಾಡುವ ವ್ಯಕ್ತಿಯಾಗಿದ್ದು, ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ 19 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಮ್ಮ ಅನುಭವವುಳ್ಳ ಮತ್ತು ಅನೇಕ ವಿಭಾಗಗಳಲ್ಲಿ ನೈಪುಣ್ಯತೆಯನ್ನು ಮತ್ತು ಪರಿಣಿತಿಯನ್ನು ಹೊಂದಿರುವ ಒಬ್ಬ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕೇವಲ ದಾವಣಗೆರೆ ಮಾತ್ರವಲ್ಲ ರಾಜ್ಯದ ನಾನಾ ಕಡೆ ಇರುವ ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಎಂಜಿನಿಯರ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವೇಶ್ವರಯ್ಯನವರ ಬುದ್ಧಿವಂತಿಕೆ ನೋಡಿಕೊಂಡು ನಾನೂ ಎಂಜಿನಿಯರ್ ಆಗ್ಬೇಕು, ಎಂದು ದೇಶಾದ್ಯಂತ ಕನಸು ಕಂಡವರಿಗೆ ಲೆಕ್ಕವೇ ಇಲ್ಲ. ಎಂಜಿನಿಯರಿಂಗ್ ಎಂದರೆ ಬುದ್ಧಿವಂತಿಕೆ, ಎಂಜಿನಿಯರಿಂಗ್ ಎಂದರೆ ಫ್ಯಾಶನ್, ಎಂಜಿನಿಯರಿಂಗ್ ಎಂದರೆ ಜೀವನ ಸುಭದ್ರ ಎನ್ನುವಂಥ ಭರವಸೆಗಳಿಗೆ ಕಟ್ಟಿಮನಿ ನೀರೆರೆದಿದ್ದಾರೆ. ಎಂಜಿನಿಯರಿಂಗ್ ಎಂದರೆ ಅಲ್ಲಿ ಜಾಣ್ಮೆಯದ್ದೆ ಮೇಲುಗೈ. ಪ್ರತಿವರ್ಷ ಹುಟ್ಟಿಕೊಳ್ಳುವ ಸಾವಿರಾರು ಹೊಸ ಎಂಜಿನಿಯರ್ಗಳಿಗೆ ಉದ್ಯೋಗವಕಾಶ ಕೊಟ್ಟ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಈ ಕ್ಷೇತ್ರ ಪ್ರವಾಹದ ರೂಪದಲ್ಲಿ ಹೊಸ ಉದ್ಯೊಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದು, ಎಂಜಿನಿಯರಿಂಗ್ ಎನ್ನುವುದೇ ಒಂದು ಟ್ರೆಂಡ್ ಸೆಕ್ಟರ್ ಆಗಿದೆ. ಎಂಜಿನಿಯರ್ ಪದವಿ ಹೊಂದಿರುವವರಿಗೆ ಯಾವುದಾದರೂ ಕೆಲಸ ಸಿಗುತ್ತದೆ ಎಂಬ ಆತ್ಮ ವಿಶ್ವಾಸ ಇರುವ ಕಾರಣ ಹಲವು ವಿದ್ಯಾರ್ಥಿಗಳು ಎಂಜಿನಿಯರಿಂಗ್ನತ್ತ ಧಾವಿಸುತ್ತಿದ್ದು, ಅವರಿಗೆಲ್ಲ ಕಟ್ಟಿಮನಿ ದಾರಿ ದೀಪವಾಗಿದ್ದಾರೆ. ಇನ್ಫಾರ್ಮಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾಗಿ, ಇಂಡಸ್ಟ್ರಿ ಇನ್ಸ್ಟಿಟ್ಯೂಟ್ ಇಂಟರಾಕ್ಷನ್ ಡೀನ್ ಆಗಿ, ಎಂಜಿನಿಯರಿಂಗ್ ಅಡ್ಮಿಶನ್ ವಿಭಾಗದ ಸದಸ್ಯರಾಗಿ, ಪತ್ರಿಕಾ ಮತ್ತು ಮಾಧ್ಯಮ ವಿಭಾಗದ ಸಂಚಾಲಕರಾಗಿ ಮತ್ತು ಶ್ರೀ ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಜಿಎಂಐಟಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶಾತಿ ಬಯಸಿ ಬಂದಾಗ ಅವರೊಡನೆ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಉದ್ಯೋಗವಕಾಶದ ಬಗ್ಗೆ ತಿಳಿ ಹೇಳಿ ಧೈರ್ಯ ತುಂಬುವ ಜೊತೆಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾಗಿ ಕಳೆದ ಎಂಟು ವರ್ಷದಿಂದ ಒಟ್ಟು 3404 ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ಕಂಪನಿಗಳಾದ ವಿಪ್ರೋ, ಟಿಸಿಎಸ್, ಆಕ್ಸೆಂಚರ್, ಸೋನಾಟ, ಬಾಷ್, ಇನ್ಫೋಸಿಸ್, ಎಸ್ಎಲ್ಕೆ ಸಾಫ್ಟವೇರ್, ಹನಿವೆಲ್, ಎಕ್ಸಾ ವೇರ್, ಐಬಿಎಮ್, ಟೆಕ್ ಮಹೇಂದ್ರ, ಟಾರ್ಗೆಟ್ ಕಾರ್ಪೊರೇಷನ್ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಇವರ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಹೊರದೇಶದ ಪ್ರತಿಷ್ಠಿತ ಕಂಪನಿಗಳಲ್ಲಿಯೂ ಕೆಲಸ ಮಾಡುತ್ತಿರುವುದು ವಿಶೇಷ. ಇವರುಗಳಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿರುವುದು ಪ್ರಶಂಸನೀಯ. ಆಮ್ಕ್ಯಾಟ್ ಕೊಡಮಾಡುವ ಪ್ರತಿಷ್ಠಿತ ಕರಿಯರ್ ಗುರು ಪ್ರಶಸ್ತಿ, ಪುಣೆ ಮೂಲದ ಎನ್ಜಿಒ ಸಂಸ್ಥೆಯಾದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಕೊಡ ಮಾಡುವ ಬೆಸ್ಟ್ ಟಿಪಿಓ ಫಾರ್ ಪ್ಲೇಸ್ಮೆಂಟ್ ಕಾಂಟ್ರಿಬ್ಯೂಷನ್ ಇನ್ ರೂರಲ್ ಏರಿಯಾ, ಮತ್ತೊಂದು ಎನ್ಜಿಓ ಸಂಸ್ಥೆಯಾದ ಯಲ್ ವತಿಯಿಂದ ಬೆಸ್ಟ್ ಲೀಡರ್ಷಿಪ್ ಪ್ರಶಸ್ತಿ, ಮದ್ರಾಸ್ ಜರ್ನಲ್ ಸೀರಿಸ್ ಪ್ರೈವೇಟ್ ಪ್ಯೂಯಲ್ ವತಿಯಿಂದ ಇನ್ಸ್ಪೆರಿಂಗ್ ಪ್ರೋಫೇಸರ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಒಟ್ಟಾರೆ ಎಂಜಿನಿಯರ್ಸ್ ಆಗಲು ಹಗಲಿರುಳು ಶ್ರಮ ವಹಿಸುವ ಕಟ್ಟಿಮನಿ ಜಿಎಂಐಟಿ ತಾಂತ್ರಿಕ ಸಂಸ್ಥೆ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ತಿಳಿಸಿದ್ದಾರೆ.