ತುಮಕೂರು, ಜು. ೧೬- ಮಹಾನಗರದಿಂದ ಕೂಗಳೆತೆ ದೂರದಲ್ಲಿರುವ ಊರುಕೆರೆ ಗ್ರಾಮವು ಇತ್ತೀಚೆಗೆ ಬಹು ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದೆ. ಈ ಗ್ರಾಮಕ್ಕೆ ಕಳೆದ ೨-೩ ವರ್ಷಗಳಿಂದ ನಗರದ ಜನರು ಈ ಭಾಗದಲ್ಲಿ ಸೈಟುಗಳನ್ನು ಕೊಂಡು ಇಲ್ಲೇ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಸೈಟುಗಳ ಬೆಲೆಯೂ ಸಹ ಗಗನಕ್ಕೇರಿದೆ.
ಮೊದಲು ಈ ಭಾಗದಲ್ಲಿ ಕೇಳುವವರೇ ಇಲ್ಲದ ಜಾಗಗಳು ಇದೀಗ ಅವುಗಳಿಗೆ ಚಿನ್ನದ ಬೆಲೆ ಬಂದಿದೆ. ಅದಕ್ಕೆ ಕಾರಣ ವಸಂತನರಸಾಪುರ ಕೈಗಾರಿಕಾ ವಲಯ. ಏಕೆಂದರೆ ವಸಂತನರಸಾಪುರ ಮತ್ತು ತುಮಕೂರು ಮಧ್ಯದಲ್ಲಿರುವ ಈ ಗ್ರಾಮ ಎರಡಕ್ಕೂ ಸಂಪರ್ಕ ಸೇತುವೆಯಾಗಿದೆ.
ಹೀಗಿರುವಲ್ಲಿ ಈ ಗ್ರಾಮ ಪಂಚಾಯ್ತಿ ಕಾರ್ಯವೈಖರಿ ಮಾತ್ರ ಶೂನ್ಯ ಎಂಬುದು ಇಲ್ಲಿನ ಹೊಸ ನಿವಾಸಿಗಳ ಆಗ್ರಹವಾಗಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಎಲ್ಲ ಊರುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿವೆ. ಪ್ರತಿಯೊಂದು ಸಂಪರ್ಕ ಪಡೆಯಲು ಗ್ರಾಮ ಪಂಚಾಯ್ತಿಯ ಅನುಮೋದನೆ ಪಡೆದೇ ಮಾಡಬೇಕಾಗಿದೆ. ಜತೆಗೆ ಇಂತಿಷ್ಟು ತೆರಿಗೆಯನ್ನು ಸಹ ಕಟ್ಟಿಯೇ ಅವರು ಅಂಕಿತ ನೀಡುತ್ತಿದ್ದಾರೆ.
ಜತೆಗೆ ನೂತನ ಗ್ರಾಮ ಪಂಚಾಯಿತಿ ಕಾರ್ಯಲಯವು ಸಹ ತುಂಬಾ ಚೆನ್ನಾಗಿದ್ದು, ಸಕಲ ಸೌಕರ್ಯ ಹೊಂದಿದೆ.
ಇನ್ನು ಈ ಗ್ರಾಮ ಪಂಚಾಯ್ತಿ ಸದಸ್ಯರು, ಅಧ್ಯಕ್ಷರು ಮಾತ್ರ ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ಮಾತ್ರ ಶೋಚನೀಯ ಸಂಗತಿ. ಏಕೆಂದರೆ ಗ್ರಾಮ ಪಂಚಾಯ್ತಿ ಎದುರುಗಡೆಯೇ ಅವ್ಯವಸ್ಥೆಯ ಗೂಡಾಗಿದೆ. ಇದರಿಂದ ಊರುಕೆರೆಯ ಹೊಸ ಬಡಾವಣೆಗಳ ನಿವಾಸಿಗಳಿಗೆ ಬೇಸರ ಮೂಡಿಸಿರುವುದಲ್ಲದೇ ಪಂಚಾಯ್ತಿ ಮೇಲೆ ಅಸಹ್ಯ ಹುಟ್ಟಿಸುವಂತೆ ಮಾಡಿದೆ. ಜತೆಗೆ ದಿನನಿತ್ಯ ಪಂಚಾಯಿತಿಗೆ ಶಾಪ ಹಾಕಿಕೊಂಡು, ಒಳಗೊಳಗೆ ಬೈದಾಡಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಹೌದುಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರೇ ಕೆಸರುಗದ್ದೆಯಂತಾಗಿದೆ. ಈ ಭಾಗದಲ್ಲಿ ಓಡಾಡುವ ಜನರು ಇಲ್ಲಿರುವ ಗುಂಡಿಗಳಿಂದ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಮಳೆಗಾಲ ಶುರುವಾಗಿರುವುದರಿಂದ ಈ ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಯಾವ ಗುಂಡಿ ಎಷ್ಟು ಆಳ ಇದೆ ಎಂಬುದೇ ಗೊತ್ತಾಗದ ಹಾಗೆ ಇರುತ್ತದೆ. ಎಷ್ಟೋ ಜನ ಈ ಗುಂಡಿಗಳೊಳಗೆ ಬಿದ್ದು ಎದ್ದು ಪಂಚಾಯಿತಿಗೆ ಶಾಪಾ ಹಾಕಿಕೊಂಡು ಓಡಾಡುತ್ತಿದ್ದಾರೆ. ರಾತ್ರಿ ವೇಳೆ ಈ ಗುಂಡಿಗಳು ಯಮಕಿಂಕರರಂತೆ ಗೋಚರಿಸುತ್ತವೆ. ಈ ಭಾಗಗಳಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆಯಾಗಲೀ, ರಸ್ತೆ (ಪಕ್ಕಾ ರಸ್ತೆಯಲ್ಲದೇ ಹೋದರೂ ಕಚ್ಛಾ ರಸ್ತೆಯೂಇರುವುದಿಲ್ಲ) ಯಮ ಸ್ವರೂಪಿಯಾದ ಈ ಗುಂಡಿಗಳು ತಮ್ಮ ಬಲಿಗಾಗಿ ಬಾಯಿ ತೆರೆದು ನಿಂತಿರುತ್ತವೆ.
ಇನ್ನು ಈ ಪಂಚಾಯ್ತಿಗೆ ಹಲವಾರು ಜನ ಸಾರ್ವಜನಿಕರು ರಸ್ತೆ ಮತ್ತು ಮೂಲ ಸೌಕರ್ಯಗಳಿಗಾಗಿ ಮೌಖಿಕವಾಗಿ, ಲಿಖಿತರೂಪವಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ. ಜತೆಗೆ ಹಾಲಿ ಅಧ್ಯಕ್ಷರು ಸಿದ್ಧಲಿಂಗಸ್ವಾಮಿಯವರು ನವ ಉತ್ಸಾಹಿ ಯುವಕ ಎಂದೇ ಬಿಂಬಿತವಾಗಿದ್ದರು (ಈ ಮೊದಲು), ಆದರೆ ಅವರು ಅಧ್ಯಕ್ಷರಾದ ಮೇಲೆ ಉತ್ಸಾಹ ಕಡಿಮೆ ಆಯಿತೇನೋ ಗೊತ್ತಿಲ್ಲ. ಏಕೆಂದರೆ ಸ್ವಾಮಿ ಅಧ್ಯಕ್ಷನಾದ ಹೊಸದರಲ್ಲಿ ತಾನು ಈ ಭಾಗವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುತ್ತೇನೆ, ತಾನೊಬ್ಬ ಮಾದರಿ ಅಧ್ಯಕ್ಷನಾಗುತ್ತೇನೆ ಎಂತೆಲ್ಲಾ ಹೇಳಿದ್ದೂ ಸಹ ಉಂಟು. ಆದರೆ ಅದೆಲ್ಲ ಪೊಳ್ಳು ಭರವಸೆಯಾಗಿಯೇ ಉಳಿದಿದೆ.
ಕಳೆದ ೨-೩ ವರ್ಷಗಳಿಂದ ಕೆಲವು ಸದಸ್ಯರು ಹೇಳುತ್ತಾ ಬಂದಿದ್ದು ಏನೆಂದರೆ ಊರುಕೆರೆ ಪಂಚಾಯ್ತಿಯು ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯ್ತಿಯಾಗಿದೆ. ಗ್ರಾಮಾಂತರ ಶಾಸಕರು ಜೆಡಿಎಸ್ ಪಕ್ಷದವರಾಗಿದ್ದು, ಅವರು ಈ ಭಾಗಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಾವು ಏನು ಮಾಡೋದು, ಪಂಚಾಯ್ತಿಯಲ್ಲಿಯೂ ಸಹ ಹಣವಿಲ್ಲ ಎಲ್ಲಿಂದ ತರೋಣ ಎಂದು ಹೇಳುತ್ತಿದ್ದರು. ಆದರೆ ಇದೀಗ ಬಿಜೆಪಿ ಅಭ್ಯರ್ಥಿ ಸುರೇಶ್ಗೌಡ ಅವರೇ ಗ್ರಾಮಾಂತರ ಶಾಸಕರಾಗಿ ಆಡಳಿತಕ್ಕೆ ಬಂದಿದ್ದಾರೆ ಅವರನ್ನು ಕೇಳಿ ಅನುದಾನ ಹಾಕಿಸಿಕೊಳ್ಳಿ ಎಂದು ಕೇಳಿದರೆ ಏನೇನೋ ಕುಂಟು ನೆಪಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ.
ಈ ಕುರಿತು ಹಾಲಿ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮಿಯವರು ಏನು ಹೇಳ್ತಾರೆ ಅಂದರೆ, ಪಂಚಾಯ್ತಿಯಲ್ಲಿ ದುಡ್ಡು ಇಲ್ಲ ನಾವು ಹೇಗೆ ಮಾಡಿಸೋಣ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಒಮ್ಮೆ ಇದೇ ಅಧ್ಯಕ್ಷರು ಮನಸ್ಸು ಮಾಡಿದರೆ ಅವರದೇ ಸ್ವಂತ ಕ್ರಷರ್ ಇದೆ. ಆ ಕ್ರಷರ್ನಲ್ಲಿ ಸಂಗ್ರಹವಾಗಿರುವ ವೇಸ್ಟ್ ಆಗಿರುವ ಮಣ್ಣನ್ನು ಇಲ್ಲಿ ತಂದು ಸುರಿಸಿದ್ದರೂ ಸಹ ಈ ಭಾಗದ ಗುಂಡಿಗಳು ಎಂದೋ ಮುಚ್ಚಿ ಹೋಗುತ್ತಿದ್ದವು. ಅವರಿಗೆ ಕೆಲಸ ಮಾಡುವ ಹುಮ್ಮಸ್ಸಿಲ್ಲ. ಬರೀ ಅಧಿಕಾರದ ದಾಹ ಎಂಬಂತೆ ಕಾಣುತ್ತಿದೆ.
ಎಲ್ಲರಿಗೂ ಅಧಿಕಾರ ಬೇಕೇ ಹೊರತು, ಜನರಿಗೆ ಕೆಲಸ ಮಾಡಿಕೊಡಬೇಕು ಎನ್ನುವ ಹಂಬಲವಿಲ್ಲ. ಜನರ ತೆರಿಗೆ ಹಣವನ್ನು ತಮ್ಮ ಖರ್ಚಿಗೆ ಬೇಕೇ ಹೊರತು, ಜನರಿಗಾಗಿ ಒಳಿತು ಮಾಡಬೇಕು ಎನ್ನುವ ಹುಮ್ಮಸ್ಸಿಲ್ಲ. ಜನರ ವೋಟು ಬೇಕೇ ಹೊರತು, ಜನರ ಹಿತ ಕಾಪಾಡುವ ಮನಸ್ಸುಇಲ್ಲ. ಇಂತಹ ದುರಾಡಳಿತದಲ್ಲಿ ನಾವುಗಳು ಜೀವನ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಪರದಾಡುತ್ತಿದ್ದಾರೆ.