೧. ಏಟು ಬಿದ್ದಾಗ ಅಥವಾ ಗಾಯಗಳಾಗಿ ಊತ ಬಂದಾಗ ನುಗ್ಗೆಸೊಪ್ಪನ್ನು ಬಾಣಲೆಯನ್ನು ಹಾಕಿ ಹುರಿದು ಬಟ್ಟೆಯಲ್ಲಿ ಹಾಕಿ ಕಟ್ಟಿ ಬಿಸಿಬಿಸಿಯಾಗಿ ಶಾಖ ಕೊಡುವುದರಿಂದ ಊತವೂ ಕಡಿಮೆ ಆಗುತ್ತದೆ, ನೋವೂ ಕಡಿಮೆ ಆಗುತ್ತದೆ.
೨. ಲಕ್ಕಿ ಮರದ ಸೊಪ್ಪನ್ನು ಹುರಿದು ಬಿಸಿಮಾಡಿ ಶಾಖ ಕೊಡುವುದರಿಂದ ನೋವು ಹಾಗೂ ಊತ ಕಡಿಮೆ ಆಗುತ್ತದೆ.
೩. ಎಕ್ಕದ ಎಲೆಗೆ ಹರಳೆಣ್ಣೆ ಸವರಿ ದೀಪದಲ್ಲಿ ಬಿಸಿಮಾಡಿ ಊತವಿರುವ ಜಾಗಕ್ಕೆ ಶಾಖ ಕೊಟ್ಟರೆ ಕಡಿಮೆ ಆಗುತ್ತದೆ.
೪. ಹುಣಸೆಮರದ ಎಲೆಯನ್ನು ತಂದು ಸ್ವಲ್ಪವೇ ಎಳ್ಳೆಣ್ಣೆ ಹಾಕಿ ಅದರಲ್ಲಿ ಎಲೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದು ಬಿಸಿ ಇರುವಾಗ ಒಂದು ಬಟ್ಟೆಗೆ ಹಾಕಿ ಗಂಟುಕಟ್ಟಿ ಊತ ಹಾಗೂ ನೋವು ಇರುವ ಜಾಗಕ್ಕೆ ಸ್ವಲ್ಪ ಶಾಖ ಕೊಡುತ್ತಾ ಬನ್ನಿ, ಊತ ಕಡಿಮೆ ಆಗುತ್ತದೆ.
೫. ಬಿಸಿಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಪುಡಿಮಾಡಿ ಹಾಕಿ ಊತವಿರುವ ಜಾಗಕ್ಕೆ ಬಿಸಿಬಿಸಿಯಾಗಿ ಹಚ್ಚುತ್ತಾ ಬನ್ನಿ.
೬. ಬೇವಿನಚಕ್ಕೆಯನ್ನು ತಂದು ಗಂಧದಂತೆ ತೇಯ್ದು ಊತವಿರುವ ಜಾಗಕ್ಕೆ ಲೇಪಿಸುವುದು.
೭. ಹುಣಸೆಹಣ್ಣನ್ನು ಮಜ್ಜಿಗೆಯಲ್ಲಿ ಅರೆದು ಪಟ್ಟುಹಾಕಿ, ಊತ ಕಡಿಮೆ ಆಗುತ್ತದೆ.
೮. ಕುರು ತರಹ ಆಗಿದ್ದರೆ ಹರಳುಗಿಡದ ಎಲೆಯನ್ನು ತಂದು ಹರಳೆಣ್ಣೆ ಸವರಿ ಬಿಸಿಬಿಸಿಯಾಗಿ ರಾಗಿಮಡ್ಡಿಯ ರೀತಿ ಮಾಡಿ. ಇದನ್ನು ಎಲೆಯ ಮೇಲಿಟ್ಟು ಬಿಗಿಯಾಗಿ ಕಟ್ಟಿದರೆ ಕುರು ಬೇಗ ಒಡೆಯುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧