
ಕಲಬುರಗಿ:ಮಾ.06: ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದೇ ಕತ್ತು ಹಿಚುಕುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಕಾರ್ಮಿಕರಿಗೆ ಕೆಲಸದಿಂದ ವಂಚನೆ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆಗಳ ನೇತೃತ್ವದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರ ಮನೆ ಮುಂದೆ ಕಾರ್ಮಿಕರು ಪ್ರತಿಭಟನೆ ಮಾಡಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಹಾಗೂ ಡಾ. ಮೀನಾಕ್ಷಿ ಬಾಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಂದಮ್ಮ ಗೋಳಾ, ಪದ್ಮಿಣಿ ಕಿರಣಗಿ, ಜಗದೇವಿ ನೂಲಕರ್, ಡಾ. ಪ್ರಭು ಖಾನಾಪೂರೆ, ಸುಧಾಮ್ ಧನ್ನಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೋವಿಡ್ ಸಾಂಕ್ರಮಿಕ ಹೊತ್ತಿನಲ್ಲಿ ನಗರಗಳಿಂದ ಅನೇಕ ಕಾರ್ಮಿಕರು ಗ್ರಾಮಗಳಿಗೆ ಮರಳಿದ್ದರು. ಅವರೆಲ್ಲರೂ ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮನರೇಗಾ ಮಾನವ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ 600ರೂ.ಗಳ ಕೂಲಿಯನ್ನು ಹೆಚ್ಚಿಸುವಂತೆ ಹಾಗೂ ಅದಕ್ಕಾಗಿ ವಾರ್ಷಿಕ ಬಜೆಟ್ನಲ್ಲಿ ಎರಡೂವರೆ ಲಕ್ಷ ಕೋಟಿ ರೂ.ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರೂ ಸಹ ಕೇಂಧ್ರ ಸರ್ಕಾರವು ಜನವಿರೋಧಿ ನೀತಿಯನ್ನು ಅನುಸರಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ಹಿಂದಿನ ಅನುದಾನಕ್ಕಿಂತಲೂ ಅತ್ಯಂತ ಕಡಿಮೆ ನಿಗದಿ ಮಾಡಿತು. ಈ ಬಾರಿಯಂತೂ ಕೇವಲ 60000 ಕೋಟಿ ರೂ.ಗಳನ್ನು ಕೊಡಲಾಗಿದೆ. ಈಗಾಗಲೇ ಉಳಿಸಿಕೊಂಡ ಬಾಕಿಯನ್ನೇ ಕೊಟ್ಟಾದ ಮೇಲೆ ಪ್ರಸಕ್ತ ವಾರ್ಷಿಕ ಅವಧಿಯಲ್ಲಿ ಅರ್ಧದಷ್ಟೂ ಹಣ ಉಳಿಯುವುದಿಲ್ಲ. ರಾಜ್ಯದಲ್ಲಿ ಸರಾಸರಿ ಕೇವಲ 32 ಮಾನವ ದಿನಗಳು, ಉದ್ಯೋಗ ಬಯಸಿದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಕೆಲಸವನ್ನು ಕಡ್ಡಾಯವಾಗಿ ಒದಗಿಸಬೇಕು ಎಂಬುದರ ಉಲ್ಲಂಘನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾ ಅನುಷ್ಠಾನವು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಅರ್ಜಿದಾರರನ್ನು ಮನರೇಗಾ ಕಾಯಕದಿಂದ ದೂರ ಉಳಿಸಲಾಗುತ್ತಿದೆ. ಬಿಸಿಲಲ್ಲಿ ಬಸವಳಿದು ರಕ್ತದೊತ್ತಡ ಕುಸಿದು ಕೆಲಸಗಾರರ ಜೀವ ಅಪಾಯಕ್ಕೆ ತಳ್ಳಲೆಂದೇ ಎನ್ಎಂಎಂಎಸ್ ತರಲಾಗಿದೆ. ಈ ಪ್ರದೇಶದಲ್ಲಿ ಬಿಸಿಲು 40ರಿಂದ 45 ಡಿಗ್ರಿಯವರೆಗೂ ಇದೆ. ಈ ಉರಿ ಬಿಸಿಲಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ಸ್ಥಳದ ಮೇಲಿರುವ ಈ ಆದೇಶ ಮತ್ತು ಆಪ್ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಲಸಗಾರರ ಬ್ಯಾಂಕ್ ಖಾತೆಗೆ ಈಗಾಗಲೇ ಆಧಾರ್ ಲಿಂಕ್ ಮಾಡಲಾಗಿದೆ. ಹಾಗೆ ನೋಡಿದರೆ ಆಧಾರ್ ಕಡ್ಡಾಯಗೊಳಿಸುವುದು ತಪ್ಪು ಎಂದು ಸುಪ್ರಿಂಕೋರ್ಟ್ ಹೇಳಿದೆ. ಆದಾಗ್ಯೂ ಇಲ್ಲಿ ಆಧಾರ್ ಕಡ್ಡಾಯವಾಗಿ ಜೋಡಣೆಗೊಳಿಸಲಾಗಿದೆ. ಮತ್ತೆ ಹೊಸದಾಗಿ ಬ್ಯಾಂಕ್ ಮೂಲಕ ಇಕೆವೈಸಿ ಲಿಂಕ್ ಮಾಡಲೇಬೇಕೆಂದು, ಇಲ್ಲದಿದ್ದರೆ ವೇತನ ಪಾವತಿಯಾಗುವುದಿಲ್ಲ ಎಂದು ಆದೇಶ ಮಾಡಲಾಗಿದೆ ಮತ್ತು ಒಬ್ಬರಿಗೂ ಇಕೆವೈಸಿ ಲಿಂಕ್ ಇಲ್ಲದಿದ್ದರೆ ಲಿಂಕ್ ಹೊಂದಿದ ಉಳಿದವರ ವೇತನವೂ ಪಾವತಿಯಾಗದಂತೆ ಗಣಕಯಂತ್ರದಲ್ಲಿ ಸಾಪ್ಟ್ವೇರ್ ಅಳವಡಿಸಲಾಗಿದೆ. ಇದರಿಂದ ಮನರೇಗಾ ಸೌಲಭ್ಯವನ್ನು ಜನತೆಗೆ ಎಳ್ಳಷ್ಟೂ ತಲುಪದಂತೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಸಂಚು ಮಾಡಿದೆ ಎಂದು ಅವರು ಆರೋಪಿಸಿದರು.
ಈಗ ಸಮಸ್ತ ಜಾಬ್ಕಾರ್ಡ್ ಹೊಂದಿದವರು ಬ್ಯಾಂಕ್ ಮುಂದೆ ಪಾಳಿ ನಿಲ್ಲಬೇಕು. ನೆಟ್ವರ್ಕ್ ಇಲ್ಲ. ಸರ್ವರ್ ಇಲ್ಲ. ಕೂಲಿ ಕಾರ್ಮಿಕರಿಗೆ ಆದ್ಯತೆ ಇಲ್ಲ. ಹೀಗೆ ಪಟ್ಟಿ ಬೆಳೆದು ಜನರನ್ನು ಮನೆರೇಗಾದಿಂದ ದೂರೀಕರಿಸುವ ಮತ್ತು ಮನರೇಗಾವನ್ನು ಲೂಟಿಕೋರರಿಗೆ ತೆರೆದಿರುವ ಕ್ರಮೇಣ ಮನರೇಗಾದ ಕತ್ತು ಹಿಸುಕುವ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಅನೇಕ ತಾಂತ್ರಿಕ ನೆಪಗಳಿಂದ ಎನ್ಎಂಆರ್ ಮಾಡದ, ಮಾಡಿದ ಕೆಲಸವನ್ನು ಶೂನ್ಯಗೊಳಿಸುವ ಪ್ರಕ್ರಿಯೆ ಎಲ್ಲೆಡೆ ಕಾಣುತ್ತಿದೆ. ಅದನ್ನು ಸರಿಪಡಿಸುವ ವ್ಯವಸ್ಥೆ ಸ್ಥಳೀಯವಾಗಿಲ್ಲ. ಆದ್ದರಿಂದ ಕೂಡಲೇ ವ್ಯವಸ್ಥೆ ಸರಿಪಡಿಸಿ ಬಾಕಿ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಕೆಲಸದ ಸ್ಥಳಗಳಲ್ಲಿನ ಎಲ್ಲ ಸೌಲಭ್ಯಗಳನ್ನು ಒದಗಿಸದೇ ನಿರಾಕರಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಸಹ ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜನತೆಯನ್ನು ಗ್ರಾಮ ಪಂಚಾಯಿತಿಗೆ ಬರದಂತೆ ಪಟ್ಟಭದ್ರ ಶಕ್ತಿಗಳೊಂದಿಗೆ ಕೈಜೋಡಿಸಿ ಭ್ರಷ್ಟಾಚಾರ ಮಾಡುತ್ತಿರುವ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದಿಂದ ವಂಚಿತ ಮಾಡುವ ಕ್ರಮವು ಜಿಲ್ಲೆಯಿಂದ ಗ್ರಾಮದವರೆಗೂ ಹಬ್ಬಿದೆ. ಕೂಡಲೇ ಅದನ್ನು ತಡೆಗಟ್ಟಿ ಎಲ್ಲ ಶ್ರಮಿಕರಿಗೂ ಮನರೇಗಾ ಪಡೆದ ಹಕ್ಕನ್ನು ಖಾತ್ರಿಗೊಳಿಸಬೇಕಾದ ಹೊಣೆಗಾರಿಕೆಯನ್ನು ತ್ರಿಟೈರ್ ವ್ಯವಸ್ಥೆಯ ಪಂಚಾಯಿತಿ ಇಲಾಖೆಯು ಖಾತ್ರಿಗೊಳಿಸುವಂತೆ ಹಾಗೂ ಮನರೇಗಾ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಿ 600ರೂ.ಗಳ ವೇತನ ಕೊಡುವಂತೆ ಅವರು ಒತ್ತಾಯಿಸಿದರು.