ಉದ್ಯಮವಾಗಿ ಬೆಳೆಯುತ್ತಿರುವ ಕ್ರೀಡೆಗಳು

ತಿಪಟೂರು, ಏ. ೧- ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಇಂಟರ್ ಕೋಲಿಗೇಟ್ ಸ್ಟೇಟ್ ಲೆವೆಲ್ ಖೋ-ಖೋ ಪುರುಷರ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೋಕೇಶ್ವರ್ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುವ ಕ್ರೀಡಾಪಟುಗಳಿಗೆ ಸಿಗುವ ಸರ್ಕಾರಿ ಸವಲತ್ತುಗಳ ಬಗ್ಗೆ ತಿಳಿಸಿ, ಭಾರತದಲ್ಲಿ ಕ್ರೀಡಾ ಲೋಕ ಬದಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ಕ್ರೀಡೆ ಈಗ ಬರೀ ಮನರಂಜನೆಯಾಗಿ ಉಳಿಯದೇ ಅದೂ ಕೂಡಾ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಹಾಗೆಯೇ ತಾವು ಖೋ-ಖೋ ಪಟುವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರ ನೀಡಿದ ಕಲ್ಪತರು ವಿದ್ಯಾಸಂಸ್ಥೆಗೆ ಚಿರಋಣಿ ಎಂದರು.
ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಕೂಡಾ ಕ್ರೀಡಾಪಟುವಾಗಿದ್ದು, ಕಲ್ಪತರು ವಿದ್ಯಾಸಂಸ್ಥೆಯ ಎಲ್ಲ ಪದಾಧಿಕಾರಿಗಳು ಕ್ರೀಡೆಗೆ ಅಭೂತಪೂರ್ವ ಪ್ರೋತ್ಸಾಹ ನೀಡುತ್ತಿರುವುದು ಕಂಡು ಖುಷಿಯಾಗುತ್ತಿದೆ ಎಂದರು.
ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ಕ್ರೀಡೆ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿರಬೇಕು. ಕ್ರೀಡೆಯಿಂದ ನಮಗೆ ದೈಹಿಕವಾಗಿ ಮಾನಸಿಕವಾಗಿ ಕ್ರಿಯಾಶೀಲರನ್ನಾಗಿಸುತ್ತದೆ. ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸ್ಸಿದ್ದರೆ ನಾವು ಏನನ್ನಾದರೂ ಜೀವನದಲ್ಲಿ ಸಾಧಿಸಬಹುದು ಹಾಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಿಂದ ದೂರ ಉಳಿಯಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಗೆಪಲ್ಲಿ ನಟರಾಜ್ ಮಾತನಾಡಿ, ಕ್ರೀಡೆ ಎನ್ನುವುದು ನಮ್ಮ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿಯನ್ನು ಹೆಚ್ಚಿಸುವ ಒಂದು ವ್ಯಾಯಾಮ. ಹಾಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುವುದರೊಂದಿಗೆ ತಮ್ಮ ವಿದ್ಯಾರ್ಥಿ ಜೀವನ ಸದಾ ಉತ್ಸಾಹಕದಿಂದ ಇರಬೇಕು ಎಂದರು.
ಪ್ರಾಚಾರ್ಯ ಡಾ.ಜಿ.ಡಿ. ಗುರುಮೂರ್ತಿ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಮಕ್ಕಳ ಬಹುಮುಖ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಒದಗಿಸುತ್ತಿದೆ. ವಿದ್ಯಾರ್ಥಿಗಳು ಖೋಖೋ ಆಟವನ್ನು ಕ್ರೀಡಾಭಾವದಿಂದ ಆಡಬೇಕು ಎಂದರು.
ಅಂತಾರಾಷ್ಟ್ರೀಯ ೧೨ನೇ ಸೌತ್ ಏಷಿಯನ್ ಖೋಖೋನಲ್ಲಿ ೨೦೧೬ ರಲ್ಲಿ ಗೋಲ್ಡ್ ಮೆಡಲ್, ೪೬ ಬಾರಿ ನ್ಯಾಷನಲ್ ಲೆವೆಲ್ ಖೋಖೋ ಆಡಿದ ವೀಣಾ ಎಂ. ರವರು ಎಲ್ಲ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದರು.
ಪ್ರಥಮ ಸ್ಥಾನವನ್ನು ಬೆಂಗಳೂರಿನ ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದ ತಂಡದವರು, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಬಿ.ಎಂ.ಎಸ್.ಸಿ.ಇ. ತಂಡದವರು ಹಾಗು ತೃತೀಯ ಸ್ಥಾನವನ್ನು ಬೆಂಗಳೂರಿನ ಎಂ.ವಿ.ಜೆ.ಐ.ಟಿ ತಂಡದವರು ಗಳಿಸಿದರು. ವಿಜೇತ ತಂಡಗಳಿಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮತ್ತು ಉಪಾಧ್ಯಕ್ಷ ಬಿ.ಎಸ್.ಉಮಾಶ್, ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್, ಕಾರ್ಯದರ್ಶಿಗಾಳಾದ ಟಿ.ಯು.ಜಗದೀಶ್‌ಮೂರ್ತಿ, ಲೋಕೇಶ್ವರವರು, ವೀಣಾ.ಎಂ., ಉಪಾಧ್ಯಕ್ಷ ಬಾಗೆಪಲ್ಲಿ ನಟರಾಜ್, ಕಾರ್ಯದರ್ಶಿ ಸುಧಾಕರ್ ಹೆಚ್.ಜಿ., ಪ್ರಾಂಶುಪಾಲರಾದ ಡಾ.ಜಿ.ಡಿ.ಗುರುಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಜಯಂತ್ ಅಭಿನಂದಿಸಿದರು.