
ಹುಮನಾಬಾದ್ : ಮಾ.13:ಪಟ್ಟಣದ ಭಾರತ ಜನಸೇವಾ ಫೌಂಡೇಶನ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಶಾಸಕ ರಾಜಶೇಖರ ಪಾಟೀಲ್ ಉದ್ಘಾಟಿಸಿದರು ನೀಡಿದರು.
ಸಮಾಜದಲ್ಲಿ ಮಹಿಳೆಯು ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಲಂಬನೆ ಸಾಧಿಸಬೇಕು ಮತ್ತು ಉದ್ಯಮಶೀಲ ಮಹಿಳೆಯಾಗಬೇಕು. ಇಂದಿನ ಯುವತಿಯರು ಪ್ರಗತಿ ಹೊಂದಲು ಅತ್ಯತ್ತಮ ಕೌಶಲ್ಯಗಳನ್ನು ಪಡೆದುಕೊಂಡು ಸ್ವಾಲಂಬಿಯಾಗಿ ಬದುಕಲು ಕಲಿಯಬೇಕು ಎಂದು ಸಲಹೆ ನೀಡಿದರು.
ಭಾರತ ಜನಸೇವಾ ಫೌಂಡೇಶನ್ ಅಧ್ಯಕ್ಷ ಸೈಯದ್ ತಾಹೇರ್ ಅಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಬಡಜನರ ಅನೂಲಕ್ಕಾಗಿ ಭಾರತ ಜನಸೇವಾ ಫೌಂಡೇಶನ್ ವತಿಯಿಂದ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ, ಟೇಲರಿಂಗ್ ಹಾಗೂ ಮೇಹಂದಿ ಬಿಡಿಸುವ ಕಲೆ ಕುರಿತು ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಯುವತಿಯರು ಸ್ವಯಂ ಉದ್ಯೋಗಿಗಳಾಗಲು 40ರಿಂದ 45ದಿನಗಳ ಕಾಲ ಉಚಿತ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ವೈಜ್ಞಾನಿಕ ಹೊಲಿಗೆಯ ಬಳಕೆ ಹಾಗೂ ಗಣಕಯಂತ್ರದ ಬಳಕೆ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಹೀಗಾಗಿ ಗ್ರಾಮೀಣ ಭಾಗದ ಯುವತಿಯರು ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಆರ್ಥಿಕ ಜೀವನ ಸುಧಾರಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯ ಅನಿಲ ಪಲ್ಹೆರಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾಳಶಟ್ಟಿ, ನ್ಯಾಯವಾದಿ ಸತೀಷ ರಾಂಪೂರೆ, ಸೈಯದ್ ಅಲ್ತಾಫ್ ಅಲಿ, ಸೈಯದ್ ಅಹ್ಮದ್ ಇದ್ದರು.