ಬೆಂಗಳೂರು,ಜು.೨೦-ಕಳೆದ ೨೦೦೮ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್? ಸ್ಪೋಟ ಪ್ರಕರಣದ ರೂವಾರಿ ನಜೀರ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ವಿವಿಧ ಆರೋಪ ಪ್ರಕರಣಗಳಲ್ಲಿ ಜೈಲು ಸೇರಿದ್ದ ಐವರು ಶಂಕಿತ ಉಗ್ರರು ಸೇರಿ ಆರು ಮಂದಿ ಆರೋಪಿಗಳ ಸಂಪರ್ಕಕ್ಕೆ ಬಂದಿದ್ದ.
ಎಲ್ಲರಿಗೂ ಬ್ರೈನ್ವಾಶ್ ಮಾಡಿ, ದುಷ್ಕೃತ್ಯ ನಡೆಸಲು ತರಬೇತಿ ನೀಡಿದ್ದ. ಅಲ್ಲದೇ ಆರೋಪಿಗಳಿಗೆ ಬೇರೆ ಬೇರೆ ಉಗ್ರ ಸಂಘಟನೆಗಳ ನಿಯಂತ್ರಕರ ಸಂಪರ್ಕ ಸಿಗುವಂತೆಯೂ ನೋಡಿಕೊಂಡಿದ್ದಾನೆ. ನಜೀರ್ ನೀಡಿದ್ದ ಸಂಪರ್ಕದ ನೆರವಿನಿಂದಲೇ ಆರೋಪಿ ಜುನೈದ್ ದುಬೈಗೆ ತೆರಳಿದ್ದಾನೆ.
ನಜೀರ್?ನ ಸೂಚನೆಯಂತೆಯೇ ಎಲ್ಲಾ ಶಂಕಿತರು ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದುಕೊಳ್ಳಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.ಶಂಕಿತ ಉಗ್ರರ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು, ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಹಾಗೂ ಫೈಜಲ್ ರಬ್ಬಾನಿ ಎಂಬ ಆರೋಪಿಗಳನ್ನು ಬಂಧಿಸಿದ್ದರು.ಈ ಮೂಲಕ ನಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಸ್ಫೋಟ ಗಳನ್ನು ತಡೆಯುವಲ್ಲಿ ಸಫಲರಾಗಿದ್ದರು. ಆರೋಪಿಗಳ ವಿಚಾರಣೆಯ ವೇಳೆ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟ ನಡೆಸಲು ಆರೋಪಿಗಳಿಗೆ ಜೈಲಿನಲ್ಲೇ ತರಬೇತಿ ನೀಡಿರುವ ಅಂಶ ಬೆಳಕಿಗೆ ಬಂದಿತ್ತು.