
ನವದೆಹಲಿ, ಸೆ.೪-ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ, ಚಂದ್ರಯಾನ -೩ರ ರಾಕೆಟ್ ಉಡಾವಣೆ ವೇಳೆ ಕೌಂಟ್ಡೌನ್ ಹಿಂದಿನ ಧ್ವನಿಯಾಗಿದ್ದ ಎನ್. ವಲರ್ಮತಿ(೬೪) ಅವರು ಹೃದಯಾಘಾತದಿಂದ ನಿಧಾನರಾಗಿದ್ದಾರೆ.
ತಮಿಳುನಾಡಿನ ಅರಿಯಾಲೂರ್ ಮೂಲದ ಎನ್. ವಲರ್ಮತಿ ಶನಿವಾರ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.೩೧ ಜುಲೈ ೧೯೫೯ ರಂದು ಜನಿಸಿದ ವಲರ್ಮತಿ ಅವರು ೧೯೮೪ ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಅವರು ಆರ್ ಐಎಸ್ಎಟಿ-೧ ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು, ಇದು ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ ಮತ್ತು ದೇಶದ ಎರಡನೇ ಉಪಗ್ರಹವಾಗಿದೆ.ಇನ್ನೂ, ಏಪ್ರಿಲ್ ೨೦೧೨ ರಲ್ಲಿ ಆರ್ ಐಎಸ್ಎಟಿ-೧ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.ಚಂದ್ರಯಾನ -೩ ರಾಕೆಟ್ ಉಡಾವಣೆ ವೇಳೆ ಅಂತಿಮ ಕ್ಷಣಗಳಿಗೆ ಅವರು ಕೊನೆಯ ಬಾರಿ ಧ್ವನಿ ನೀಡಿದ್ದರು.ಅಷ್ಟೇ ಅಲ್ಲದೆ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಇಸ್ರೋ ಮಾಜಿ ನಿರ್ದೇಶಕ ಪಿ.ವಿ.ವೆಂಕಟಕೃಷ್ಣನ್, ಶ್ರೀಹರಿಕೋಟಾದಿಂದ ಇಸ್ರೊ ಭವಿಷ್ಯದ ಮಿಷನ್ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-೩ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು ಎಂದು ಉಲ್ಲೇಖಿಸಿದ್ದಾರೆ.