
ಕಲಬುರಗಿ:ಮೇ.11:ಇಷ್ಟ ಪಟ್ಟು ಓದುವವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ. ಅದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 ಅಂಕ ಪಡೆದ ಮನ್ವಿತಾ ಉತ್ತಮ ಉದಾಹರಣೆ ಎಂದು ಸಿದ್ದಪ್ಪ ಭಗವತಿ ಹೇಳಿದರು.
ನಗರದ ರಾಮ ಮಂದಿರ ಸಮೀಪವಿರುವ ತತ್ವ ಕೋಚಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ಉತ್ತಮ ಅಂಕ ಗಳಿಸಿದ ಮನ್ವಿತಾ ಹಾಗೂ ರಕ್ಷಿತಾ ಅವರನ್ನು ಇನ್ಸ್ಟಿಟ್ಯೂಟ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಬಹುಮಾನ ಸ್ವೀಕರಿಸಿ ಮಾತನಾಡಿದ ಮನ್ವಿತಾ, ನನಗೆ ತತ್ವ ಇನ್ಸ್ಟಿಟ್ಯೂಟ್ ನ ಅನುಭವಿ ಶಿಕ್ಷಕರ ಮಾರ್ಗದರ್ಶನ ಹಾಗೂ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಉತ್ತಮ ಬೋಧನೆ ಅತಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು ಎಂದಳು.
ತತ್ವ ಇನ್ಸ್ಟಿಟ್ಯೂಟ್ ನಿರ್ದೇಶಕಿ ಸುಮಾ ಭಗವತಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ವಿಶೇಷ ಉಪನ್ಯಾಸ. ಪ್ರತಿ ಪಾಠದ ಬಳಿಕ ತೆಗೆದುಕೊಂಡ ಘಟಕ ಪರೀಕ್ಷೆಗಳು ವಿದ್ಯಾರ್ಥಿಗಳ ಈ ಸಾಧನೆಗೆ ಸಹಾಯಕಾರಿಯಾದವು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ತತ್ವ ಕೋಚಿಂಗ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.