ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ18: ಮಾನವ ಜನ್ಮ ದೊಡ್ಡದು ಹಾನಿ ಮಾಡಬೇಡಿ, ಮಾಡುವ ಕರ್ಮಗಳು ಜೀವನಕ್ಕೆ ಬೆಲೆ ಬರುತ್ತವೆ, ಆಗ ಮಾತ್ರ ಮಾನವ ಜನ್ಮ ದೊಡ್ಡದಾಗುತ್ತೆ ಎಂದು ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು
ಇಲ್ಲಿನ ಇನ್ನರ್ ವೀಲ್ ಕ್ಲಬ್, ಹುಬ್ಬಳ್ಳಿಯ ಎಚ್ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ಕೆಎಲ್ಇ ಸುಚಿರಾಯು ಆಸ್ಪತ್ರೆ ಸಹಯೋಗದೊಂದಿಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹೃದಯ ಹಾಗೂ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೇದವನ್ನು ಓದಿದವರು ದೊಡ್ಡವರಾಗುವುದಿಲ್ಲ ಜನರ ವೇದನೆಯನ್ನು ಅರಿತವನು ದೊಡ್ಡವನಾಗುವ, ಮುಸುರೆ ನೀರು ಕುಡಿದ ಹಸು ನಮಗೆ ಅಮೃತ ಸಮಾನ ಹಾಲು ನೀಡುತ್ತದೆ. ಈ ನಿಸರ್ಗದಲ್ಲಿ ಅದ್ಭುತವಾದ ಪ್ರೇಮ ಧರ್ಮ ತುಂಬಿದೆ, ಆದರಂತೆ ಈ ಸಮಾಜಕ್ಕೆ ಸ್ವಚ್ಛ, ಪ್ರೇಮಪೂರ್ಣ ಕರುಣೆಯ ಮನಸ್ಸಿನವರು ಬೇಕು. ಈ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ನಿಂದ ಉತ್ತಮ ಸೇವೆ ನಡೆಯುತ್ತಿದ್ದು ಬಡವರಿಗೆ ಉಪಯೋಗವಾಗುತ್ತಿದೆ ಎಂದರು.
ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ, ಎಚ್ಸಿಜಿ ಕ್ಯಾನ್ಸರ್ ಸೆಂಟರ್ನ ಮುಖ್ಯಸ್ಥರಾದ ಜೈ ಕಿಶನ್, ಡಾ.ವಿಶಾಲ್ ಕುಲಕರ್ಣಿ, ಹೃದ್ರೋಗ ತಜ್ಞರಾದ ಡಾ.ಷಣ್ಮುಖ ಹಿರೇಮಠ್, ಕಿರ್ಲೊಸ್ಕರ್ನ ನಾರಾಯಣ, ಇನ್ನರ್ ವೀಲ್ ಅಧ್ಯಕ್ಷೆ ರೇಖಾ ಪ್ರಕಾಶ್, ಕಾರ್ಯದರ್ಶಿ ಅಶ್ವಿನಿ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಉಮಾ ಲೋಕೇಶ್ ಮತ್ತಿತರರಿದ್ದರು. ಸುಮಾರು 200 ಜನ ಹೃದಯ ತಪಾಸಣೆ ಹಾಗೂ 85ಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ ತಪಾಸಣೆ ನಡೆಸಿಕೊಂಡು ತಜ್ಞ ವೈದ್ಯರ ಸಲಹೆ ಪಡೆದರು.
ಇನ್ನರ್ ವೀಲ್ ಕ್ಲಬ್ನ ಸದಸ್ಯರಾದ ಜಯಶ್ರೀ ರಾಜಗೋಪಾಲ್, ಮೇಘನಾ, ನೈಮಿ, ಸುಜಾತಾ ನಾಗರಾಜ್, ಸುಜಾತಾ ಪತ್ತಿಕೊಂಡ, ಬಿಂದು, ಸುನೀತಾ, ಸ್ಮಿತಾ, ರಮ್ಯ, ಶೋಭಾ, ವಿಜಯ ಅಗ್ನಿಹೋತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.