ಇತಿಹಾಸ-ವಸ್ತು ಸಂಗ್ರಹಾಲಯಗಳಿಗೆ ಅವಿನಾಭಾವ ಸಂಬಂಧ


ಬಳ್ಳಾರಿ,ಮೇ 19: ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ವಸ್ತು ಸಂಗ್ರಹಾಲಯಗಳು ಮಾನವನು ತಾನು ಪ್ರಾಚೀನತೆಯಿಂದ ಆಧುನಿಕತೆಯೆಡೆಗೆ ಸಾಗಿಬಂದ ಪುರಾವೆ ತಿಳಿಸುತ್ತವೆ. ನಾವು ಈ ದಿನದಲ್ಲಿ ಏನಾಗಿದ್ದೀವಿ ಮತ್ತು ಹೇಗಿದ್ದೇವೆ ಎಂಬುದನ್ನು ತಿಳಿಯುವುದೇ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ವಿಶೇಷವಾಗಿದೆ ಎಂದು ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ನಿರ್ದೇಶಕ ಪ್ರೊ. ರವಿಶೆಟ್ಟರ್ ಕೋರಿ ಅವರು ಹೇಳಿದರು.
ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ, ಬಳ್ಳಾರಿ ಹೆರಿಟೇಜ್ ಫೌಂಡೇಶನ್ ಹಾಗೂ ಹಂಪಿಯ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿನ ಹೊಂಗಿರಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇತಿಹಾಸದ ಹೆಜ್ಜೆ ಗುರುತುಗಳನ್ನು ಹಿಡಿದಿಟ್ಟುಕೊಳ್ಳುವುದು ವಸ್ತು ಸಂಗ್ರಹಾಲಯಗಳ ಕೆಲಸವಾಗಿದ್ದು, ಅದರಲ್ಲಿ ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಸಹಭಾಗಿತ್ವನ್ನು ಹೊಂದಿದೆ. ವಾಸ್ತವವಾಗಿ ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳಿಗೆ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯವು ಶಿಲಾಯುಗದ ಉಪಕರಣಗಳ ವಿಶಿಷ್ಟವಾದ ಇತಿಹಾಸ ಪೂರ್ವ ಮಾಹಿತಿ ಒಳಗೊಂಡಿದೆ ಎಂದರು.
ಈ ಸಂಗ್ರಹಾಲಯದಲ್ಲಿ ಹೆಚ್ಚಿನವು ಕಲ್ಲಿನ ಉಪಕರಣಗಳು ಮತ್ತು ಕುಂಬಾರಿಕೆ, ಬಿಳಿ ಚಿಪ್ಪಿನ ಮೂಳೆ ಮತ್ತು ಸ್ಟೀಟೈಟ್ ಮಣಿಗಳು, ಕಬ್ಬಿಣದ ಉಪಕರಣಗಳು ಮತ್ತು ಟೆರಾಕೋಟಾ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಶಿಲಾಯುಗದ ಮೇಲೆ ಕೇಂದ್ರೀಕೃತವಾಗಿರುವ ಏಕೈಕ ವಸ್ತು ಸಂಗ್ರಹಾಲಯ, ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯವು ಇದಾಗಿದೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ರಾಜಮಂಡ್ರಿಯ ಕೇಶವ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಸ್ತು ಸಂಗ್ರಹಾಲಯಗಳು ಆಧುನಿಕ ಸಂಶೋಧನೆಗೆ ಮಾದರಿಯಾಗಿವೆ. ಇವು ಮುಂದಿನ ಪೀಳಿಗೆಗೂ ಸಹಾಯಕಾರಿಯಾಗಲಿವೆ ಎಂದು ಹೇಳಿದರು.
ಬಳ್ಳಾರಿ ಹೆರಿಟೇಜ್ ಫೌಂಡೇಶನ್‍ನ ಟ್ರಸ್ಟಿ ಟಿ.ಜಿ.ವಿಠ್ಠಲ್ ಅವರು ಮಾತನಾಡಿ, ವಸ್ತು ಸಂಗ್ರಹಾಲಯಗಳು ಇತಿಹಾಸದ ಪಳೆಯುಳಿಕೆಗಳಿದ್ದಂತೆ, ಮಾಹಿತಿ ಕೆದಕುತ್ತಾ ಹೋದಂತೆ, ಅದರ ಸುತ್ತಲೂ ಅನೇಕ ಸುದ್ದಿಗಳು ದೊರಕುತ್ತವೆ. ಮ್ಯೂಸಿಯಂ ಎನ್ನುವ ಪದಗಳಲ್ಲಿ ಆಳವಾದ ಅಧ್ಯಯನ ಅಡಗಿದೆ ಅದನ್ನು ಅರಿಯುವ ತವಕ ಯುವಪೀಳಿಗೆಯಲ್ಲಿ ಅಡಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಬಾಬು, ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕರಾದ ಗೌರಿ ಸೇರಿದಂತೆ ಸೃಜನ, ಜಯಶ್ರೀ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.