ಇಂದು ಗಾಯಗಳು ನಾಟಕ ಪ್ರದರ್ಶನ

ತುಮಕೂರು, ಆ. ೧೯- ನಗರದ ಡಾ. ಗುಬ್ಬಿವೀರಣ್ಮ ಕಲಾಕ್ಷೇತ್ರದಲ್ಲಿ ಇಲ್ಲಿನ ಝೆನ್ ಟೀಮ್ ವತಿಯಿಂದ ಆ. ೧೯ ರಂದು ಸಂಜೆ ೭ ಗಂಟೆಗೆ ಖ್ಯಾತ ನಟ ಪ್ರಕಾಶ್ ರೈ ಅವರ ‘ನಿರ್ದಿಗಂತ’ ಸಂಸ್ಥೆಯ ನೇತೃತ್ವದಲ್ಲಿ ‘ಗಾಯಗಳು’ ನಾಟಕವನ್ನು ಆಯೋಜಿಸಲಾಗಿದೆ ಎಂದು ಝೆನ್ ಟೀಮ್ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಈ ನಾಟಕದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದಭಟ್ ಅವರದು. ಶ್ವೇತಾರಾಣಿ ಹಾಸನ ಅವರ ಸಹ ನಿರ್ದೇಶನವಿದೆ. ಪಿರಾಂಡೆಲೊ ಅವರ ವಾರ್, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಮಂಟೋ ಅವರ ಶರೀಫನ್, ಕೃಷ್ಣಮೂರ್ತಿ ಹನೂರು ಅವರ ಅಜ್ಞಾತನೊಬ್ಬ ಆತ್ಮಕತೆ, ಬ್ರೆಕ್ಟ್, ಸಾಹಿರ್ ಲುಧಿಯಾನ್ವಿ ಸೇರಿದಂತೆ ಹಲವರ ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪವಿದು.
ಪ್ರವೇಶ ದರ ೫೦ ರೂ. ಇದ್ದು ನಾಟಕ ಪ್ರದರ್ಶನಕ್ಕೆ ೧೦ ನಿಮಿಷಕ್ಕೆ ಮುಂಚೆ ಪ್ರೇಕ್ಷಕರು ಆಗಮಿಸಲು ಕೋರಲಾಗಿದೆ.
ಟಿಕೆಟ್‌ಗಾಗಿ ಮೊ: ೯೯೮೬೩೭೫೬೭೦ ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.
ಇಡೀ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮ ಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿ ಮ್ಯಾಕ್‌ಬೆತ್‌ಗಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ, ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆ ಇಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ ಈ ನೆಲದ ತುಂಬ. ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿದ್ದೇವೆ. ಅವು ಸಹಜವಾಗಿಯೇ ಮಹಿಳೆಯರ ನೋವಿನ ಹಲ್ಲುಗಳಾಗಿ ಪರಿಗಣಿಸಿವೆ. ನಮ್ಮಿಂದ ಎಣಿಸಲಾಗದಷ್ಟು ಗಾಯದ ಕಥೆಗಳಿವೆ. ಇಲ್ಲಿ ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ, ಸಂತಾಪಗಳಿವೆ.