
ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.07: ಪಟ್ಟಣದ ಇಂದು ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಮತ್ತು ಸ್ವಾಮಿ ವಿವೇಕಾನಂದ ರಕ್ತ ಭಂಡಾರಿ ನಿಧಿ ಬಳ್ಳಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಟ್ಟೂರು, ಇಂದು ಪದವಿ ಮಹಾವಿದ್ಯಾಲಯ, ಎನ್ಎಸ್ಎಸ್ ಘಟಕ, ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಯಿತು.
ರಕ್ತದಾನ ಶಿಬಿರದಲ್ಲಿ ಎನ್ಎಸ್ಎಸ್ ಶಿಬಿರಾರ್ಥಿಗಳು ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಶಿಬಿರದಲ್ಲಿ ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಸಿಬ್ಬಂದಿಯವರು ರಕ್ತದಾನದ ಮಹತ್ವ ಮತ್ತು ಇದರಿಂದ ಆಗುವ ಉಪಯೋಗಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಇಂದು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಾಗೀಶಯ್ಯ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಂತಹ ನಿಟ್ಟಿನಲ್ಲಿ ಹಾಗೂ ದಾನದಲ್ಲಿಯೇ ಶ್ರೇಷ್ಠವಾದ ರಕ್ತದಾನವು ಸಹ ಒಂದಾಗಿದೆ, ಜೊತೆಗೆ ಒಬ್ಬ ವ್ಯಕ್ತಿಯ ಜೀವ ಉಳಿಸುವುದು ಎಷ್ಟು ಮುಖ್ಯವೋ ಅವರಲ್ಲಿಯೂ ಸಹಕಾರದ ಮನೋಭಾವನೆಯನ್ನು ಬೆಳೆಸುವುದು ಅಷ್ಟೇ ಮುಖ್ಯ. ಪ್ರಸ್ತುತ ಸಮಾಜಕ್ಕೆ ವಿದ್ಯಾರ್ಥಿಗಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಬೋಧಕ ಮತ್ತು ಬೋಧಿಕೇತರ ಸಿಬ್ಬಂದಿ, ವ್ಯವಸ್ಥಾಪಕರಾದ ಗೋಪಾಲ ರೆಡ್ಡಿ, ಸ್ವಾಮಿ ವಿವೇಕಾನಂದ ರಕ್ತ ಭಂಡಾರಿ ನಿಧಿಯ ಹಗರಿಬೊಮ್ಮನಹಳ್ಳಿಯ ಆಪ್ತ ಸಮಾಲೋಚಕರಾದ ಮಹಾಂತೇಶ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.