ಆಸ್ತಿ ಅಂತಸ್ತು ಸಮಾಜಕ್ಕೆ ಸಮರ್ಪಣೆಯೆಂದು  ಬದುಕಬೇಕು: ಸುರೇಶ್ ಶೆಟ್ಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.02: ಎಲ್ಲಾ ಸಮುದಾಯ, ಜಾತಿಗಳೊಂದಿಗೆ ಬೆರೆತು ಬೆಳೆಯಬೇಕು. ಆಸ್ತಿ ಅಂತಸ್ತು ಸಮಾಜಕ್ಕೆ ಸಮರ್ಪಣೆಯೆಂದು ಬದುಕಬೇಕೆಂದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಬಿಜೆಪಿ ಶಾಸಕ ಗುರ್ಮೆ ಸುರೇಶ್ ಪಿ.ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಬಂಟ್ಸ್ ಭವನದ ಎಂ.ಆರ್, ಆಳ್ವ ವೇದಿಕೆಯಲ್ಲಿ ನಿನ್ನೆ ಸಂಜೆ ತುಂಗಭದ್ರಾ ಬಂಟರ ಸಂಘ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ನಮ್ಮ ಜನರು ಸಾಮಾನ್ಯವಾಗಿ ಬಾಂಬೆಗೆ ಹೋಗುತ್ತಾರೆ. ಆದರೆ ನಾನು ಬಳ್ಳಾರಿಗೆ ಬಂದೆ, ಇಲ್ಲಿ ವೀರಶೈವ ಕಾಲೇಜಿನಲ್ಲಿ ಓದಿದೆ.
ನನ್ನ ತಾಯಿ ಹೇಳಿದ್ದರು, ಎಷ್ಟೇ ಕಷ್ಟ ಬಂದರೂ ಪ್ರಾಮಾಣಿಕತೆ, ಸತ್ಯ ಬಿಡಬಾರದೆಂದು ಅದನ್ನು ನನ್ನ ಜೀವನದಲ್ಲಿ ಪಾಲಿಸಿಕೊಂಡು ಬಂದಿರುವೆ.
ಎಲ್ಲಾ ಅನುಭವಗಳು ಈ ಊರಲ್ಲಿ ಪಡೆದಿರುವೆಂದರು.
ಬಳ್ಳಾರಿಯಲ್ಲಿ ನಾನು ಹಮಾಲರ ಸಂಘದ ಕಾರ್ಯದರ್ಶಿಯಾಗಿ  ಸೇವಾಗುಣ ಕಲಿತಿದ್ದು ಹಮಾಲರಿಂದ. ಬದುಕಿನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದೆ. ರಾಜ ಕಾರಣಕ್ಕೆ ಬಂದ  ಮೇಲೆ ಬದುಕು ಮೊದಲಿನಷ್ಟು ಸಂತೋಷವಾಗಿಲ್ಲ  ಎಂಬುದನ್ನು ಹೇಳಲು ಮರೆಯಲಿಲ್ಲ. ನಿಮ್ಮ‌ನಂಬಿಕೆ ಪ್ರೀತಿ ವಿಶ್ವಾಸಕ್ಕೆ ಉಳಿಸಿಕೊಳ್ಳುವೆ ಹಣ ಮಾಡಲು ರಾಜಕೀಯ ಆಯ್ಕೆ ಮಾಡಿಕೊಳ್ಳಲಿಲ್ಲ ಸೇವೆಗಾಗಿ ಎಂದರು.
ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾತನಾಡಿ, ಎಲ್ಲರಿಗೂ ಅಣ್ಣನ ರೀತಿಯಲ್ಲಿ ಸ್ಪಂದಿಸಿ ಬೆಳೆದವರು, ಸುರೇಶ್ ಶೆಟ್ಟಿ ಅವರು ಹಾಡುತ್ತಿದ್ದ “ನಮ್ಮೂರ ಮಂದಾರ ಹೂವೆ” ಹಾಡನ್ನು ಹಾಡುತ್ತ ಉತ್ತಮ ಗಾಯಕರಾಗಿದ್ದರು. ನನ್ನ ಜೀವನದಲ್ಲಿ ಅವರು ಅನೇಕ ರೀತಿ ಸಹಾಯ, ಸಹಕಾರ ಮಾಡಿದ್ದಾರೆ.  ಎಲ್ಲರಿಗೂ ಬೆಳಕು ಕೊಡುವ ಸೂರ್ಯನಂತೆ ಅವರ ಬದುಕು ಎಂದು ಅಭಿಪ್ರಾಯಪಟ್ಟರು.
ನಗರದ ಯುವ ನಾಯಕ ಭರತ್ ಅವರು ಸಹ ನಗರದ ಅಭಿವೃದ್ಧಿಗೆ ಮುಂದಾಗಲಿದ್ದು ಅವರಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ನಗರ ಶಾಸಕ  ನಾರಾ ಭರತ್ ರೆಡ್ಡಿ ಮಾತನಾಡಿ, ಸುರೇಶ್ ಶೆಟ್ಟಿ ಅವರು ತಮ್ಮ ತಂದೆ ಸಮಾನರು, ಕೊಡುಗೈ ದಾನಿ , ಜಾತ್ಯಾತೀತ ನಾಯಕರಾಗಿದ್ದರು.  ನಿಮ್ಮ ಸಂಪರ್ಕ ಬಳ್ಳಾರಿಗೆ ನಿರಂತರವಾಗಿರಲಿ ಎಂದು ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಮಾತನಾಡಿ, ಸುರೇಶ್ ಅವರಿಗೆ ಬಳ್ಳಾರಿ ಕರ್ಮಭೂಮಿಯಾಗಿದೆ. ಅವರ ಇಲ್ಲಿನ ಸಾಮ್ರಾಜ್ಯ ನೋಡಿ ನನಗೆ ತುಂಬಾ ಸಂತೋಷ ಆಯ್ತು ಎಂದರು.
ಸಭಾಧ್ಯಕ್ಷತೆಯನ್ನು  ತುಂಗಭದ್ರಾ ಬಂಟರ  ಸಂಘದ ಡಾ.ಮಧುಸೂದನ್ ಶೆಟ್ಟಿ ಅವರು ವಹಿಸಿದ್ದರು.
ಸಮಾರಂಭದಲ್ಲಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಯೂರ ಮಧು ಸೂಧನ್,  ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ  ಶ್ರೀನಿವಾಸ್ ರಾವ್, ಮಾಜಿ ಅಧ್ಯಕ್ಷ ಡಾ.ಡಿ.ಎಲ್.ರಮೇಶ್ ಗೋಪಾಲ್, ಉಪ ಮೇಯರ್ ಜಾನಕಿ. ತುಂಗಭದ್ರಾ ಬಂಟರ  ಸಂಘದ  ಕಾರ್ಯದರ್ಶಿ ಸೂರ್ಯಕುಮಾರ್ ಶೆಟ್ಟಿ ಇದ್ದರು. ಖಜಾಂಚಿ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣ್ಯರನ್ನು ಚಂಡೆ ವಾದನ ಪೂರ್ಣಕುಂಬದೊಂದಿಗೆ  ಕಾರ್ಯಕ್ರಮದ ವೇದಿಕೆಗೆ ಕರೆತರಲಾಯ್ತು.
ಡಿ.ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಣೆ.