
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು8: ತಾಲೂಕಿನ ಆದರಹಳ್ಳಿ ಗ್ರಾಮದ ಗುಡ್ಡದಲ್ಲಿರುವ ಗವಿಸಿದ್ದೇಶ್ವರ ಮಠದಲ್ಲಿ ನಿನ್ನೆ ಮಾತಪ್ಪಶ್ವಿ ಡಾ. ರಾಮರಾವ್ ಮಹಾರಾಜರ ಮತ್ತು ಡಾಕ್ಟರ್ ಕುಮಾರ್ ಮಹಾರಾಜರ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಹತ್ತಿ ಮತೋರಿನ ಶ್ರೀಗಳು ಮಠಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ ಎಂದರು.
ಸಮಾಜದಲ್ಲಿ ಇಂದು ಮನುಷ್ಯನ ಬದುಕು ವಿವಿಧ ಕಾರಣಗಳಿಂದಾಗಿ ಮತ್ತು ಬದುಕಿನ ಒತ್ತಡದಿಂದಾಗಿ ಆರೋಗ್ಯದ ಮೇಲೆ ಒಂದಿಲ್ಲ ಒಂದು ಮಾರಕ ರೋಗಗಳು ಆಕ್ರಮಣ ಮಾಡುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ನಿರ್ಲಕ್ಷ್ಯ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇಂಥ ಶಿಬಿರಗಳು ಗ್ರಾಮೀಣ ಜನರ ಆರೋಗ್ಯವನ್ನು ಮತ್ತು ಹಿತವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಗವಿಮಠದ ಡಾಕ್ಟರ್ ಕುಮಾರ್ ಮಹಾರಾಜರು ಮಾತನಾಡಿ ತಾವು ಕೇವಲ ಧರ್ಮ ಬೋಧನೆಯನ್ನು ಮಾಡದೆ ಜೊತೆಗೆ ಭಕ್ತರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿರುವದಾಗಿ ಈ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಮುಂದಾದಾಗ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದ್ದರಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇಂತಹ ಗ್ರಾಮೀಣ ಪ್ರದೇಶಕ್ಕೆ ಬಂದು ಜನರ ಆರೋಗ್ಯ ತಪಾಸಣಾ ನಡೆಸಿರುವುದು ಶ್ಲಾಘನೀಯ ಎಂದರು ಇದೇ ಸಂದರ್ಭದಲ್ಲಿ ಸಪ್ತಗಿರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಲಾಯಿತು.