ಬೀದರ:ಎ.10: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ
ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಹಾಗೂ ಯುವ ರೆಡ್ಕ್ರಾಸ್ ಘಟಕ ಆಯೋಜಿಸಿದ ವಿಶ್ವ ಆರೋಗ್ಯ ದಿನಾಚರಣೆ – 2023ರ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕ ಸತ್ಯ. ಆರೋಗ್ಯವೊಂದಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಆದುದರಿಂದ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡಬೇಕು. ನಮ್ಮ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ರಕ್ಷಣೆಗೂ ಮಹತ್ವ ನೀಡಬೇಕು. ಕುಟುಂಬದಲ್ಲಿ ನಮ್ಮ ತಂದೆ ತಾಯಿಗಳ ಮತ್ತು ಪೋಷಕರ ಆರೋಗ್ಯದ ಕಡೆಗೆ ಗಮನ ನೀಡಬೇಕೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ನಮ್ಮ ಆರೋಗ್ಯ ನಮ್ಮ ಕೈಯಲಿದೆ. ಆರೋಗ್ಯಕರ ಹವ್ಯಾಸ ಹಿತ – ಮಿತ ಆಹಾರ ಸೇವನೆ, ತರಕಾರಿ, ಹಣ್ಣು ಹಂಪಲುಗಳ ಸೇವನೆ ಯೋಗ ಪ್ರಾಣಾಯಾಮ ಮುಂತಾದವುಗಳ ಮುಖಾಂತರ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಯುವ ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಹಣಮಂತಪ್ಪ ಬಿ. ಸೇಡಂಕರ ಅವರು ವಿಶ್ವ ಆರೋಗ್ಯದ ದಿನದ ಈ ವರ್ಷದ ಧ್ಯೇಯವಾಕ್ಯ “ಸರ್ವರಿಗೂ ಆರೋಗ್ಯ” ಹಾಗೂ ಆರೋಗ್ಯ ದಿನಾಚರಣೆಯ ಹಿನ್ನಲೆಯನ್ನು ಕುರಿತು ಮಾತನಾಡುತ್ತಾ ಹಿಂದೆಂದಿಗಿಂತಲೂ ಇಂದು ಆರೋಗ್ಯ ಕಾಳಜಿ ಹೆಚ್ಚಾಗಿದೆ, ಆರೋಗ್ಯಕರ ಪ್ರವಾಸೋದ್ಯಮವು ಉದ್ಯಮವಾಗಿ ರೂಪಗೊಂಡಿದದೆ ಎಂದು ಹೇಳಿದ ಅವರು ವಿಶ್ವ ಸಂಸ್ಥೆಯ ಸ್ಥಾಪನೆಯಾದಗಿನಿಂದ ಜನರಿಗೆ ಆರೋಗ್ಯ ಕಾಳಜಿಗೆ ಉತ್ತೇಜಿಸುವುದರ ಜೊತೆಗೆ ದುರ್ಬಲರಿಗೆ ಸೇವೆ ನೀಡಲು ಮತ್ತು ಜಗತ್ತನನ್ನು ಆರೋಗ್ಯಯುತವಾಗಿ ಸುರಕ್ಷಿತವಾಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರಿ ಶಿವರಾಜ ಜಿ. ಮಠ್ಠ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶ್ರೀ ಬಸವರಾಜ ಬಿರಾದಾರ ನೆರವೇರಿಸಿದರೆ, ಶ್ರೀಮತಿ ಶೈಲಜಾ ಸಿದ್ಧವೀರ ನಿರೂಪಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.