ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ

ಕಲಬುರಗಿ,ಏ.21:ನಾವು ಆರೋಗ್ಯ ಕಳೆದುಕೊಂಡು ಯಾವುದೇ ಸಂಪತ್ತು ಗಳಿಸಿದರೆ ಪ್ರಯೋಜನೆಯಿಲ್ಲ. ಆರೋಗ್ಯ ಸಂಪತ್ತೊಂದಿದ್ದರೆ ಎಲ್ಲಾ ಸಂಪತ್ತಿದ್ದಂತೆ. ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಆರೋಗ್ಯ ತಪಾಸಣೆ ಜರುಗುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವುದು ಪ್ರಸ್ತುತವಾಗಿ ಅವಶ್ಯಕವಾಗಿದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ 890ನೇ ಬಸವ ಜಯಂತಿ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮಗಳು-8ರಲ್ಲಿ ‘ತಡಕಲ್ ಸ್ಪೇಷಾಲಿಟಿ ಕ್ಲಿನಿಕ್’, ‘ಎನ್‍ಆರ್‍ಜಿ ಮೆಡಿಕಲ್ ಅಡ್ವಂಟೇಜಸ್’ ಮತ್ತು ‘ಕಾಯಕಯೋಗಿ ಸೇವಾ ಸಂಸ್ಥೆ’ಯ ಸಹಯೋಗದೊಂದಿಗೆ ನಗರದ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ‘ಮಹಾದೇವಿ ವೃದ್ಧಾಶ್ರಮ’ದಲ್ಲಿ ಶುಕ್ರÀವಾರ ಹಮ್ಮಿಕೊಳ್ಳಲಾಗಿದ್ದ ‘ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಮೂಲಭೂತ ಸೌಲಭ್ಯಗಳಲ್ಲಿ ವೈದ್ಯಕೀಯ ಸೌಲಭ್ಯ ಪ್ರಮುಖವಾಗಿದೆ. ಇದು ಶ್ರೀಮಂತರು, ಉಳ್ಳವರಿಗೆ ಮಾತ್ರ ದೊರೆತರೆ ಪ್ರಯೋಜನೆಯಿಲ್ಲ. ಸಮಾಜದಲ್ಲಿರುವ ಬಡವರು, ದುರ್ಬಲ ವರ್ಗದವರಿಗೆ ಆರೋಗ್ಯ ಸೌಲಭ್ಯಗಳು ದೊರೆಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಗಳು ಬಹಳ ಮಹತ್ವವಹಿಸುತ್ತವೆ. ಈ ಕಾರ್ಯ ಮಾಡುತ್ತಿರುವ ಬಳಗ, ಸಂಸ್ಥೆಯವರು ಅಭಿನಂದನಾರ್ಹರಾಗಿದ್ದಾರೆ ಎಂದರು.
ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿಶ್ವರಾಜ ಬಿ.ತಡಕಲ್ ಮತ್ತು ಎನ್‍ಆರ್‍ಜಿ ಮೆಡಿಕಲ್ ಅಡ್ವಂಟೇಜಸ್‍ನ ನಿಕಿಲ್ ಆರ್.ಗಾಯಗನಕರ್ ಅವರು ವೃದ್ಧಾಶ್ರಮದ ಎಲ್ಲರಿಗೆ ಆರೋಗ್ಯ ಕಾಪಾಡಿಕೊಳ್ಳುವ ಕ್ರಮಗಳ ಬಗ್ಗೆ ವಿವರಿಸುವುದರ ಜೊತೆಗೆ ಉಚಿತ ತಪಾಸಣೆ ನಡೆಸಿಕೊಟ್ಟರು. ಉಚಿತವಾಗಿ ಔಷಧಿ ಕೂಡಾ ವಿತರಣೆ ಮಾಡಲಾಯಿತು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಇರಾದಾರ ದೇಗಾಂವ, ಹಿರಿಯ ಸದಸ್ಯ ಶಿವಯೋಗಪ್ಪ ಬಿರಾದಾರ, ಕಾಯಕಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ ಕೇದರನಾಥ ಕುಲಕರ್ಣಿ, ವೃದ್ಧಾಶ್ರಮದ ವ್ಯವಸ್ಥಾಪಕಿ ಬಸಮ್ಮ ಕೆ.ಸ್ಥಾವರಮಠ, ಸಮಾಜ ಸೇವಕ ಮಲ್ಲಿಕಾರ್ಜುನ ಕಾಕಂಡಕಿ ಸೇರಿದಂತೆ ಇನ್ನಿತರರಿದ್ದರು.