
ರಾಯಚೂರು,ಮಾ.೨೯- ನಗರದ ಆಫೀಸರ್ಸ್ ಕಾಲೋನಿಯಲ್ಲಿ ಗುರುಗುಂಟಾ ಪೂಜ್ಯಶ್ರೀ ಮರಿಸ್ವಾಮಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುತ್ತಿರುವ ೬ ನೇ ದಿನದ ಆದ್ಯಾತ್ಮಿಕ ಪ್ರವಚನ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಮತಗಿಯ ಗಣೇಶ ಶಾಸ್ತ್ರಿಗಳು ತಮ್ಮ ಪುರಾಣ ಪ್ರವಚನದಲ್ಲಿ ಮರಿಸ್ವಾಮಿಗಳ ಪವಾಡಗಳ ಬಗ್ಗೆ ಪ್ರಸ್ತಾಪಿಸುತ್ತ ಮಸ್ಕಿ ಪಟ್ಟಣದ ಒಂದು ಕಡು ಬಡತನದ ಕುಟುಂಬದವರ ಮನೆಗೆ ಪೂಜ್ಯಶ್ರೀ ಮರಿಸ್ವಾಮಿ ಮಹಾಸ್ವಾಮಿಗಳು ಇಷ್ಠಲಿಂಗ ಮಹಾಪೂಜೆಗೆಂದು ತಮ್ಮ ಸ್ವ ಇಚ್ಛೆಯಿಂದ ದಯಮಾಡಿಸಿದಾಗ ದಂಪತಿಗಳ ಮನೆಯಲ್ಲಿ ಇಷ್ಠಲಿಂಗದ ಪೂಜೆಗೆ ದೀಪವನ್ನು ಬೆಳಗಲೂ ಸಹಿತ ಎಣ್ಣೆ ಇರದೇ ಇದ್ದಾಗ ಇಷ್ಠಲಿಂಗದ ತೀರ್ಥವನ್ನೇ ಪ್ರಣತಿಗೆ ಹಾಕಿದಾಗ ಮನೆಯ ತುಂಬಾ ಬೆಳಕು ಮತ್ತು ಆ ದಂಪತಿಗಳ ಬಾಳಲ್ಲಿಯೂ ಇಲ್ಲಿಯವರೆಗೆ ಅಷ್ಠ ಐಶ್ವರ್ಯವನ್ನು ಪವಾಡ ರೂಪದಲ್ಲಿ ನಿಮ್ಮ ಮನೆತನಕ್ಕೆ ಸೂರ್ಯ ಚಂದ್ರರಿರುವವರೆಗೂ ಬಡತನವೆಂಬುದೇ ಸುಳಿಯುವುದಿಲ್ಲ ಎಂದಾಗ ಅವರ ಬಾಳು ಬೆಳಗಿತು. ಹಾಗೂ ಇಲ್ಲಿಯವರೆಗೂ ಶ್ರೀಮಠಕ್ಕೆ ಆಗಮಿಸಿ ಲಿಂ. ಶ್ರೀಗಳ ಸೇವೆಯಲ್ಲಿ ಪ್ರತೀ ವರ್ಷವೂ ಭಾಗವಹಿಸುತ್ತಿದ್ದಾರೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ ಎಂದರು.
ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿಗಳು ಸಾಂಕೇತಿಕವಾಗಿ ಐದು ಜನ ಮುತೈದೆಯರಿಗೆ ಉಡಿ ತುಂಬುವ ಮೂಲಕ ಶುಭಾಶೀರ್ವಾದ ಮಾಡಿದರು. ನಂತರ ಬಡಾವಣೆಯ ಮಹಿಳೆಯರು ಒಬ್ಬರಿಗೊಬ್ಬರು ಉಂಡಿ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಶೋಭೆ ತಂದರು.
ಇದೇ ಸಂದರ್ಭದಲ್ಲಿ ನಗರದ ಹತ್ತಿರವಿರುವ ರಾಂಪೂರ ಸದ್ಭಕ್ತರಲ್ಲರು ಸೇರಿ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ೯೦೦೨ ರೂಪಾಯಿಗಳನ್ನು ಸೇವೆಸಲ್ಲಿಸಿದ ಇವರಿಗೆ ವೇದಿಕೆಯ ಮೇಲೆ ಶ್ರೀಗಳು ಗೌರವಿಸಿದರು. ಗವಾಯಿಗಳಿಂದ ಸಂಗೀತ ಕಾರ್ಯಕ್ರಮವೂ ಜರುಗಿತು ಎ.ಎಸ್.ರಘುಕುಮಾರ ತಬಲಾ ಸಾಥ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ವಾಮದೇವ ಶಿವಾಚಾರ್ಯ ಸ್ವಾಮಿಜಿಗಳು, ಅಂಕುಶದೊಡ್ಡಿ ಬೃಹನ್ಮಠ, ಶ್ರೀಮಠದ ಸರ್ವ ಸದ್ಭಕ್ತರು, ನಗರದ ಹಾಗೂ ಆಫೀಸರ್ಸ್ ಕಾಲೋನಿಯ ಸರ್ವ ಸದ್ಭಕ್ತರು ಉಪಸ್ಥಿತರಿದ್ದರು.