
ಬಸವಕಲ್ಯಾಣ: ಆಧ್ಯಾತ್ಮದ ಶಿಖರದಂತಿರುವ ಶ್ರೀ ರಾಮನ ಚರಿತ್ರೆ ಭಾರತೀಯರಿಗೆ ಅತ್ಯಂತ ಶ್ರದ್ಧಾಪೂರ್ವಕವಾಗಿರುವಂತಹ ಕಾರ್ಯ, ಶ್ರೀ ರಾಮನ ಬದುಕೇ ಒಂದು ಪವಾಡ, ಶ್ರೀ ರಾಮನ ಮೇಲೆ ಭಕ್ತಿ, ಶ್ರದ್ಧೆ ಇಟ್ಟು ನಡೆದಾಗ ಮಾನವನ ಬದುಕು ಹಸನಾಗುತ್ತದೆ. ಇಡೀ ಭಾರತ ದೇಶದ ಹಿಂದುಗಳಿಗೆ ಆದರ್ಶ ಪ್ರಾಯವಾಗಿರುವಂಥ ದೇವರೆಂದರೆ ಶ್ರೀರಾಮ. ಶ್ರೀರಾಮನ ಮೇಲೆ ಹಿಂದುಗಳ ಶ್ರದ್ಧೆ, ವಿಶ್ವಾಸ, ನಂಬಿಕೆ ಅಪಾರವಾಗಿದೆ. ಅವರ ಮೇಲೆ ಶ್ರದ್ಧೆ ಇಟ್ಟು ನಡೆದಾಗ ನಮ್ಮೆಲ್ಲರ ಬದುಕು ಪಾವನವಾಗುತ್ತದೆ ಮತ್ತು ಸುಂದರವಾಗುತ್ತದೆ ಎಂದು ಹಾರಕೂಡದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಾರಕೂಡ ಗ್ರಾಮದಲ್ಲಿ ಗುರುವಾರ ಶ್ರೀರಾಮ ನವಮಿ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದ ಶ್ರೀಗಳು ಶ್ರೀ ರಾಮನ ಜೀವನ ಭಕ್ತರ ಪಾಲಿಗೆ ನಂದನವನ, ಮಹಾಂತ ಭಗವಂತನಾದಂತಹ ಶ್ರೀ ರಾಮನ ಬದುಕು, ಅವರ ಆದರ್ಶ ತತ್ವಗಳು ಮಾನವನ ಜೀವನಕ್ಕೆ ದಾರಿದೀಪ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಶರಣು ಸಲಗರ, ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಹಾರಕೂಡ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ಗ್ರಾಮದ ಮುಖಂಡರಾದ ಅಯ್ಯಪ್ಪ ಸಜ್ಜನಶೆಟ್ಟಿ, ವಿಜಯಕುಮಾರ ಸಂಗೋಳಗೆ, ಗ್ರಾಪಂ ಸದಸ್ಯ ಅಪ್ಪಣ್ಣ ಡಾವರೆ, ಸಿದ್ರಾಮ ಹೆಗಡೆ ಉಪಸ್ಥಿತರಿದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರೆ, ಮಹಾದೇವ ದೆಗಾಂವ ನಿರೂಪಿಸಿದರು. ಅಪ್ಪಾರಾವ ಬಿರಾದರ ವಂದನಾರ್ಪಣೆ ಮಾಡಿದರು.