ಸಂಜೆವಾಣಿ ವಾರ್ತೆ
ದಾವಣಗೆರೆ.ಅ.29; ಹೊನ್ನಾಳಿ ತಾಲೂಕಿನ ಮಾದನಭಾವಿಯಲ್ಲಿ ದಸರಾ ಬನ್ನಿ ಕೃಷಿ ಮೇಳದಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಅವರು ಭಾಗವಹಿಸಿ ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ವೇಳೆ ಡಾ. ರವಿಕುಮಾರ್ ಟಿ.ಜಿ ಮಾತನಾಡಿ, ದಿನೇದಿನೇ ಜಾಗತಿಕ ತಾಪಮಾನವು ಹೆಚ್ಚಳವಾಗುತ್ತಿದ್ದು, ಇದು ಮಳೆ ಬೀಳುವ ಕಾಲಾನುಕ್ರಮದ ಮೇಲೆಯೇ ನೇರ ದುಷ್ಪರಿಣಾಮ ಬೀರಿದೆ. ಇಂಥ ವಿಷಯ ಸ್ಥಿತಿಯಲ್ಲಿ ಕೃಷಿಯನ್ನು ನಂಬಿದ ರೈತರ ಬದುಕು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಪ್ರೋತ್ಸಾಹ, ಆಧುನಿಕ ಕೃಷಿ ಪದ್ಧತಿ ಮತ್ತು ನೈತಿಕ ಬೆಂಬಲ ನೀಡುವಲ್ಲಿ ದಸರಾ ಬನ್ನಿ ಕೃಷಿ ಮೇಳ ಯಶಸ್ವಿಯಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಂಡು, ಕೃಷಿಯಲ್ಲಿ ಖುಷಿ ಕಾಣಲಿ ಎಂದು ಶುಭ ಕೋರಿದರು.