
ದೇವದುರ್ಗ,ಮಾ.೩೧- ಪ್ರಯಾಣಿಕರು ಹಾಗೂ ಆಟೋ ಚಾಲಕರ ಅನುಕೂಲಕ್ಕಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಆಟೋ ಸ್ಟ್ಯಾಂಡ್ ನಿರ್ಮಿಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ಗೆ ಕಲ್ಯಾಣ ಕರ್ನಾಟಕ ಆಟೋ ವಾಹನ ಚಾಲಕರ ಸಂಘ ಗುರುವಾರ ಮನವಿ ಸಲ್ಲಿಸಿತು.
ಪಟ್ಟಣದ ದಿನೇದಿನೆ ಬೆಳೆಯುತ್ತಿದ್ದು ವಿವಿಧ ಕೆಲಸಕ್ಕೆ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಪ್ರಮುಖ ವೃತ್ತ, ಜನನಿಬಿಡ ಪ್ರದೇಶದಲ್ಲಿ ಆಟೋ ನಿಲ್ಲಿಸಲು ಸ್ಟ್ಯಾಂಡ್ಗಳೇ ಇಲ್ಲ. ಇದರಿಂದ ಚಾಲಕರು ರಸ್ತೆ ಮೇಲೆ ನಿಲ್ಲಿಸುವ ಸ್ಥಿತಿಯಿದೆ. ಇದರಿಂದ ಸಂಚಾರ ದಟ್ಟಣೆ ಆಗುವ ಜತೆಗೆ ಬೇರೆ ವಾಹನಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಹಲವು ಪಟ್ಟಣಗಳಲ್ಲಿ ಆಟೋಸ್ಟ್ಯಾಂಡ್ ನಿರ್ಮಿಸಲಾಗಿದೆ. ಆದರೆ, ನಮ್ಮಲ್ಲಿ ಕೊರತೆಯಿದ್ದು ಜನರಿಗೆ ಸಮಸ್ಯೆಯಾಗಲಿದೆ ಎಂದು ದೂರಿದರು.
ಕೂಡಲೇ ಪಟ್ಟಣದ ಪ್ರಮುಖ ವೃತ್ತಗಳಾದ ಮಿನಿವಿಧಾನಸೌಧ, ಜೈರುದ್ದೀನ್ ಪಾಷಾ ಸರ್ಕಲ್, ಹೊಸಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್, ಗಾಂಧಿ ವೃತ್ತ, ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಹನುಮಯ್ಯ ನಾಡದಾಳ, ಅಧ್ಯಕ್ಷ, ರಫಿ, ಹನುಮಂತ, ಯಂಕಪ್ಪ, ಶಿವಕುಮಾರ್, ಅರ್ಜುನ್, ಮಹಾಂತೇಶ, ಹನುಮಂತ ಮನ್ನಾಪುರ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.