ಅಲ್ಲಮಪ್ರಭು ಪಾಟೀಲರಿಗೆ ಕಲಬುರಗಿಯ ಸಮಗ್ರ ಅಭಿವೃದ್ಧಿಗೆ ಸಮಿತಿಯಿಂದ 21ಅಂಶಗಳ ಪ್ರಸ್ತಾವನೆ ಸಲ್ಲಿಕೆ

ಕಲಬುರಗಿ:ಜೂ.18:ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲರವರಿಗೆ ಅವರ ನಿವಾಸಕ್ಕೆ ನಿಯೋಗದ ಮೂಲಕ ಭೇಟಿ ಮಾಡಿ ಕಲಬುರಗಿ ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಮಿತಿಯಿಂದ 21 ಮಹತ್ವದ ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿ ಚರ್ಚಿಸಲಾಯಿತು.
ಕಲಬುರಗಿ ಮಹಾನಗರದ ಅಭಿವೃದ್ಧಿಗೆ ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಅದಕ್ಕೆ ಪೂರಕವಾಗಿ ಕಾಲಮಿತಿಯ ಯೋಜನೆಗಳನ್ನು ಹಮ್ಮಿಕೊಳ್ಳುವುದು.ಕಲಬುರಗಿ ಮಹಾನಗರದ ಎಲ್ಲಾ ಬಡಾವಣೆಗಳಿಗೆ ಮುಖ್ಯವಾಗಿ ಮೂಲಭೂತ ಸೌಕರ್ಯಗಳು (ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಗಳ ಅಗಲಿಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ, ವಿದ್ಯುತ್ ದೀಪಗಳ ವ್ಯವಸ್ಥೆ, ಉದ್ಯಾನವನಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಫುಟಪಾಥ್‍ಗಳ ನಿರ್ಮಾಣ ಮುಂತಾಗಿ) ಕಾಲಮಿತಿ ಯೋಜನೆ ಕೈಗೊಂಡು ಪೂರ್ಣಗೊಳಿಸಬೇಕು.
24*7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಾ ವಾರ್ಡುಗಳಿಗೆ ಕಾಲಮಿತಿಯಲ್ಲಿ ಕಾರ್ಯಾಚರಣೆಯ ಕ್ರಮ ಕೈಗೊಳ್ಳಬೇಕು. (2014ರಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.)
ಕಲಬುರಗಿ ಮಹಾನಗರ ಪಾಲಿಕೆ ಏಕಪಕ್ಷೀಯವಾಗಿ ಆಸ್ತಿ ಕರ ಹೆಚ್ಚಿಸಿರುವ ಬಗ್ಗೆ ಪುನರ್ ಪರಿಶೀಲಿಸಿ ಕರ ಹಿಂದಿನ ದರಕ್ಕೆ ನಿಗದಿ ಮಾಡಬೇಕು. ಕರ ಹೆಚ್ಚಿಸುವಾಗ ವಾಡಿಕೆಯಂತೆ ಜನರಿಂದ ಮತ್ತು ಜನಪ್ರತಿನಿಧಿಗಳಿಂದ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು.
ಕಲಬುರಗಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಉದ್ಯೋಗ ಸೃಷ್ಟಿಗೆ ಹಾಗೂ ಬಡ, ಮಧ್ಯಮ ವರ್ಗದವರಿಗೆ ಸ್ವಂತ ಮನೆ, ಸ್ವಂತ ಉದ್ಯೋಗಕ್ಕಾಗಿ ಕಲಬುರಗಿಯಲ್ಲಿ ನವ ನಗರ ನಿರ್ಮಾಣ ಮಾಡಬೇಕು.
ಕಲಬುರಗಿ ಮಹಾನಗರದ ಕನಿಷ್ಟ ಐದು ಜನದಟ್ಟಣೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. (ರಾಮಮಂದಿರ, ಬಸ್ ನಿಲ್ದಾಣ, ಹುಮನಾಬಾದ ಬೇಸ್, ಖರ್ಗೆ ಪೆಟ್ರೋಲ್ಪಂಪ್, ಪಟೇಲ್ ವೃತ್ತ ಮುಂತಾಗಿ).
ಕಲಬುರಗಿ ನಗರಕ್ಕೆ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕಿರುವಂತೆ ಎರಡನೆಯ ರಿಂಗ್ ರಸ್ತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಸ್ಮಾರ್ಟ ಸಿಟಿಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಸ್ಮಾರ್ಟ ಸಿಟಿ ದರ್ಜೆಗೆ ತರಬೇಕು.
ಕಲಬುರಗಿ ದಕ್ಷಿಣ, ಉತ್ತರ ಮತ್ತು ಗ್ರಾಮೀಣ ಕ್ಷೇತ್ರದ ಶಹಾಬಾದ ಸೇರಿಸಿ ಬೃಹತ್ ಕಲಬುರಗಿ ಮಹಾನಗರ ಪಾಲಿಕೆ ನಿರ್ಮಾಣ ಮಾಡಬೇಕು.
ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣ ಸ್ಥಾಪನೆ ಮಾಡಿ, ಕ್ರಿಕೇಟ್, ಫುಟಬಾಲ್, ಬಾಸ್ಕೆಟ್ ಬಾಲ್ ಹಾಗೂ ಇತರೆ ಕ್ರೀಡೆಗಳಿಗೆ ಅವಕಾಶ ನೀಡಬೇಕು. 2018ರಲ್ಲಿ ಸರಕಾರ ಈ ಬಗ್ಗೆ ಘೋಷಣೆಯೂ ಸಹ ಮಾಡಿದೆ.
ಕಲಬುರಗಿಗೆ ಮಂಜೂರಾಗಿರುವ ಆರ್.ಟಿ.ಐ. ಕಮೀಷನರೇಟ್ ಕಚೆರಿ ಕಲಬುರಗಿಯಲ್ಲಿಯೇ ಸ್ಥಾಪಿಸಬೇಕು. ಕಲಬುರಗಿ ನಗರದಲ್ಲಿ ಉದ್ಯೋಗ ಸೃಷ್ಟಿಗೆ ಬೃಹತ್ ಉದ್ದಿಮೆ ಸ್ಥಾಪನೆಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯ ಬಗ್ಗೆ ರಾಜ್ಯ ಸರಕಾರದ ವತಿಯಿಂದ ಅಧಿಕೃತವಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು. ಕಲಬುರಗಿಗೆ ಮಂಜೂರಾಗಿರುವ ನೀಮ್ಝ್ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಸೂಕ್ತ ಕ್ರಮ ರಾಜ್ಯ ಸರಕಾರದ ವತಿಯಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
ಕಲಬುರಗಿಗೆ ಮಂಜೂರಾಗಿರುವ ಟೆಕ್ಸಟೈಲ್ ಪಾರ್ಕ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.
2018ರಲ್ಲಿ ಸರಕಾರ ಘೋಷಣೆ ಮಾಡಿರುವಂತೆ, ಕಲಬುರಗಿಯಲ್ಲಿ ಸೋಲಾರ ಪಾರ್ಕ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. 2018ರಲ್ಲಿ ಸರಕಾರ ಘೋಷಣೆ ಮಾಡಿರುವಂತೆ ಕಲಬುರಗಿಯಲ್ಲಿ ವಿಮಾನ ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.
2019ರಲ್ಲಿ ಘೋಷಣೆಯಾಗಿರುವಂತೆ, ಕಲಬುರಗಿ ವಿಮಾನಯಾನ ಸೇವೆಯನ್ನು ಆರ್ಥಿಕ ವಲಯವನ್ನಾಗಿ ಮಾಡಬೇಕು.371ನೇ(ಜೆ) ಕಲಂ ನಿಯಮಾವಳಿಗಳಂತೆ, ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೇರಿಗಳು, ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ವಿಶೇಷ ಮುತುವರ್ಜಿ ವಹಿಸಿ ಸರಕಾರದ ಮೇಲೆ ಒತ್ತಡ ತರಬೇಕು.2015 ರಲ್ಲಿ ಘೋಷಣೆ ಮಾಡಿರುವಂತೆ, ಕಲಬುರಗಿ ನಗರಾಭಿವೃದ್ಧಿಯಿಂದ ಕೈಗೊಳ್ಳಬೇಕಾದ ವಾಣಿಜ್ಯ ಸಂಕೀರ್ಣ ನಿರ್ಮಾಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಲಬುರಗಿ ಮಹಾನಗರದ ರಚನಾತ್ಮಕ ಪ್ರಗತಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಲ್ಲಿಸಿದ ಮಹತ್ವದ ಅಂಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರ ಜೊತೆ ಸಮಿತಿಯ ಮುಖಂಡರ ಉಪಸ್ಥಿತಿ ಯಲ್ಲಿ ಚರ್ಚಿಸಿ ಈ ಮಹತ್ವದ ಅಂಶಗಳ ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕರಾದ ಅಲ್ಲಮಪ್ರಭು ಪಾಟೀಲರವರು ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಡಾ.ಮಾಜಿದ್ ದಾಗಿ ಜ್ಞಾನಮಿತ್ರ ಸಾಮವೆಲ್, ಕಲ್ಯಾಣರಾವ ಪಾಟೀಲ, ಅಬ್ದುಲ ರಹೀಮ್ ಭೀಮರಾಯ ಕಂದಳ್ಳಿ, ಅಸ್ಲಂ ಚೌಂಗೆ, ಶಿವಾನಂದ ಬಿರಾದಾರ, ಮಲ್ಲಿನಾಥ ಸಂಗಶೆಟ್ಟಿ,ಸಾಲೋಮನ್ ದಿವಾಕರ್, ಸಾಬಿರ್ ಅಲಿ, ಮಲ್ಲಿಕಾರ್ಜುನ ಭೂಸನೂರ, ಸಾಜಿದ್ ಅಲಿ ರಂಜೋಳಿ,ಬೀಮಶೆಟ್ಟಿ ಮುಕ್ಕಾ, ಶಿವಾನಂದ ಕಾಂದೆ ,ಶರಣಬಸಪ್ಪಾ ಕುರಿಕೋಟಾ, ಗೌತಮ್ ಕಾಂಬಳೆ,ಮೈತಾಬ್ ಸಾಬ್, ಮಹ್ಮದ್ ಗೌಸ್, ಮಹ್ಮದ್ ಪಾಶಾಮಿಯಾ,ಜಿಲಾನಿ ಖಾದ್ರಿ ಸೇರಿದಂತೆ ಸಮಿತಿಯ ಅನೇಕರು ಉಪಸ್ಥಿತರಿದ್ದರು.