ಅಮೂಲ್ ನಲ್ಲಿ ನಂದಿನಿ ವಿಲೀನಕ್ಕೆಅವಕಾಶವಿಲ್ಲ:ಬಾಲಚಂದ್ರ ಸ್ಪಷ್ಟನೆ

ಬೆಳಗಾವಿ,ಏ.11- ಅಮೂಲ್ ನಲ್ಲಿ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಆಗುವುದಿಲ್ಲ ಎಂತಹ ಪರಿಸ್ಥಿತಿ ಬಂದರೂ ಅದಕ್ಕೆ ನಾವು ಅವಕಾಶ ಮಾಡಿಕೊಡಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಹೊಟೇಲ್​ನಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂದಿನಿಗಾಗಿ ಎಂತಹ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಮೂರು ತಿಂಗಳ ಹಿಂದೆ ಮಂಡ್ಯಕ್ಕೆ ಅಮಿತ್ ಷಾ ಅವರು ಆಗಮಿಸಿದ್ದ ವೇಳೆ ಅಮೂಲ್ ಮತ್ತು ನಂದಿನಿ ಎರಡೂ ಜತೆಯಾಗಿ ಹೋದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲ‌ ಆಗುತ್ತದೆ ಎಂದು ಹೇಳಿದ್ದರು.
ಅದಾದ ಬಳಿಕ ಈಗ ಒಂದು ವಾರದಿಂದ ರಾಜ್ಯದಲ್ಲಿ ಅಮೂಲ್ – ನಂದಿನಿ‌ ಗಲಾಟೆ ಶುರುವಾಗಿದೆ. ಕೆಎಂಎಫ್ ತೀರ್ಮಾನವೇ ಸುಪ್ರೀಂ. ವಿಲೀನಕ್ಕೆ ಅವಕಾಶ ಕೊಡಲ್ಲ. ಅಮೂಲ್ ಸೇರಿ ಯಾವುದೇ ಕಂಪನಿ ಬಂದರೂ ನಂದಿನಿ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಂದಿನಿ ಹೇಗೆ ಉಳಿಸಬೇಕು, ಬೆಳೆಸಬೇಕು ಎಂಬುದು ಗೊತ್ತಿದೆ. ಹೀಗಾಗಿ ರಾಜ್ಯದಲ್ಲಿ ಅಮೂಲ್ ಮತ್ತು ನಂದಿನಿ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಮನವಿ ಮಾಡಿದರು.
ಅಮಿತ್ ಷಾ, ಕೇಂದ್ರ ಸರ್ಕಾರ ಏನಾದರೂ‌ ಇಂತಹ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಮೊದಲು ವಿರೋಧ ಮಾಡುವವರು ನಾವೇ. ಅಮುಲ್ ಜತೆ ಯಾವುದೇ ರೀತಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಚುನಾವಣೆ ಬಂದಿರುವ ಹಿನ್ನೆಲೆ ಮತದಾರರ ತಲೆ ಕೆಡಿಸುವ ಉದ್ದೇಶದಿಂದ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ವಿರೋಧಿಗಳು ಅಪಪ್ರಚಾರ:
ಚುನಾವಣೆ ಮುಗಿದ ಬಳಿಕ‌ ಇದನ್ನು ಎಲ್ಲರೂ ಮರೆಯುತ್ತಾರೆ. ಕೆಎಂಎಫ್ ಜೊತೆ ಸುಮಾರು 50 ಲಕ್ಷ ಮತದಾರರು ಸಂಬಂಧ ಹೊಂದಿದೆ. ಹೀಗಾಗಿ ರಾಜಕೀಯ ದುರುದ್ದೇಶದಿಂದ ಮತದಾರರ ತಲೆ ಕೆಡಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ‌ ವಿರುದ್ಧ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ನಂದಿನಿ ಹಾಲು ಪದಾರ್ಥಗಳು ಉತ್ಪಾದನೆಯಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಒಂದು ಘಟಕ‌ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅಮೂಲ್ ತನ್ನ ಲಾಭಾಂಶದ ಶೇ.10ರಷ್ಟು ಪ್ರಚಾರಕ್ಕೆ ಬಳಸುತ್ತದೆ. ಬರುವ ದಿನಗಳಲ್ಲಿ ನಾವು ಕೂಡ ಹೆಚ್ಚಿನ ಪ್ರಚಾರ ಮಾಡುತ್ತೇವೆ.‌ ಅದೇ ರೀತಿ ಅಮೂಲ್ ಹಾಲಿನ ದರ ನಂದಿನಿಗಿಂತ ಹೆಚ್ಚಿದ್ದು, ನಂದಿನಿ‌ ದರ ಹೆಚ್ಚು ಮಾಡುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದೆ ಎಂದರು.