ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ

ಚಿತ್ರದುರ್ಗ.ಜೂ.೪; ಜಿಲ್ಲಾ ಪಂಚಾಯಿತಿ ಆಯವ್ಯಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಮಂಜೂರಾತಿ ನೀಡುವ ಮುನ್ನ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಡ್ಡಾಯವಾಗಿ ಚರ್ಚಿಸಬೇಕು. ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಬೇಕು ಎಂದು ಪ್ರವಾಸೋಧ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ ಹೇಳಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  2022-23ನೇ ಸಾಲಿನ ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಅನುದಾನ ಕ್ರಿಯಾ ಯೋಜನೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಅಯವ್ಯಯ, 2022-23ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಅನುಮೋದನೆ ಕುರಿತು ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನಪ್ರತಿನಿಧಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸುವುದರಿಂದ ಕಾಮಗಾರಿಗಳ ಅನುಷ್ಠಾನದಲ್ಲಿ ಗೊಂದಲ ಉಂಟಾಗುವುದು ತಪ್ಪುತ್ತದೆ. ಆದ್ಯತೆ ಮೇರೆಗೆ ಜನರಿಗೆ ಅಗತ್ಯ ಇರುವ ಕಾಮಗಾರಿಗಳನ್ನು ಕೈಗೆತ್ತಿ ಕೈಗೊಳ್ಳಬಹುದು. ಕಳೆದ ವರ್ಷ ಅನುಮೋದನೆ ನೀಡಿದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮುಂದಿನ ಸಭೆಯಲ್ಲಿ ಎಲ್ಲಾ ಕಾಮಗಾರಿಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.ನರೇಗಾ ಗುರಿ ಪೂರ್ಣಗೊಳಿಸಲು ಸೂಚನೆ: ಕಳೆದ ವರ್ಷ 52 ಲಕ್ಷ ಮಾನವ ದಿನಗಳ ಗುರಿಯ ನರೇಗಾದಲ್ಲಿ ಜಿಲ್ಲಾ ಪಂಚಾಯಿತಿ ನೀಡಲಾಗಿತ್ತು. ಇದರಲ್ಲಿ 46 ಲಕ್ಷ ಮಾನವ ದಿನಗಳ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ವರ್ಷ 48 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು.ರಾಜ್ಯ ಹಲವು ಜಿಲ್ಲಾ ಪಂಚಾಯಿತಿಗಳು ನರೇಗಾ ಗುರಿಯನ್ನು ಪೂರ್ಣಗೊಳಿಸಿ, ಹೆಚ್ಚಿನ ಮಾನವದಿನಗಳ ಸೃಜನೆ ಮಾಡಿವೆ. ನಮ್ಮ ಜಿಲ್ಲೆಯಲ್ಲಿ ನಿಗಿದಿತ ಗುರಿ ತಲುಪಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿ ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ ನೀಡಿದ ಗುರಿಯ ಪೂರ್ಣಗೊಳಿಸಬೇಕು.ನರೇಗಾ ಕ್ರಿಯಾಯೋಜನೆ ಕಾಲಕ್ಕೆ ತಂಕ್ಕತೆ ರೂಪಿಸಬೇಕು. ಬೇಸಿಗೆಯಲ್ಲಿ ಜಲಾನಯನ ಕಾಮಗಾರಿಗಳಿಗೆ ಒತ್ತು ನೀಡಿದರೆ, ಮಳೆಗಾಲ ಆರಂಭವಾದ ನಂತರ ಸಾಮಾಜಿಕ ಅರಣ್ಯ ಹಾಗೂ ನೆಡುತೋಪುಗಳ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಜನರಿಗೆ ಅಗತ್ಯ ಹಾಗೂ ಅನುಕೂಲ ಇರುವ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕು. ಗ್ರಾಮೀಣ ಜನರ ಬದುಕನ್ನು ಸುಸ್ತಿರಗೊಳಿಸುವಲ್ಲಿ, ನರೇಗಾ ಒಂದು ಸಮಗ್ರ ಯೋಜನೆಯಾಗಿದೆ. ಪ್ರಸಕ್ತ ವರ್ಷದಲ್ಲಿ ನರೇಗಾ ಕ್ರಿಯೋಜನೆ ರೂಪಿಸಿದ ಹಾಗೂ ಕಾಮಗಾರಿ ಅನುಷ್ಠಾನ ಮಾಡದ ಗ್ರಾಮ ಪಂಚಾಯಿತಿಗಳ ಪಿಡಿಓಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾತ್ ಮನೋಹರ ಸೂಚನೆ ನೀಡಿದರು.ಸಭೆಯಲ್ಲಿ ಜಿ.ಪಂ.ಸಿಇಓ ದಿವಾಕರ.ಎಂ.ಎಸ್, ಜಿ.ಪಂ.ಮುಖ್ಯಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.