ಅನೈತಿಕ ಸಂಬಂಧ ಅಟ್ಟಾಡಿಸಿ ಯುವಕನ ಕೊಲೆ

ಬೆಂಗಳೂರು,ಮೇ.೨೫-ವಿವಾಹಿತ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ದೇವನಹಳ್ಳಿಯ ಪ್ರದೀಪ್(೨೭) ಕೊಲೆಯಾದ ಯುವಕನಾಗಿದ್ದು, ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಈತನಿಗೆ ಹಲವು ಬಾರಿ ಮನೆಯವರು ಬುದ್ಧಿವಾದ ಹೇಳಿದ್ದರು. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಠಾಣೆಯಲ್ಲಿಯೇ ೨ ಬಾರಿ ಯುವಕನಿಗೆ ಅನೈತಿಕ ಸಂಬಂಧ ಮುಂದುವರೆಸದಂತೆ ರಾಜಿ ಪಂಚಾಯಿತಿ ಮಾಡಲಾಗಿತ್ತು.ಆದರೂ, ಹಠಕ್ಕೆ ಬಿದ್ದು ವಿವಾಹಿತ ಮಹಿಳೆ ಯೊಂದಿಗೆ ಸಂಬಂಧವನ್ನು ಬೆಳೆಸಿದ್ದ ಆತ ಹೆಣವಾಗಿ ಹೋಗಿದ್ದಾನೆ.
ಇನ್ನು ಮಹಿಳೆಗೆ ಬುದ್ಧಿ ಹೇಳಿದರೂ ಯುವಕನೊಂದಿಗೆ ಕದ್ದು ಮುಚ್ಚಿ ಕರೆ ಮಾಡಿ ಸಂಬಂಧ ಬೆಳೆಸುತ್ತಿದ್ದಳು. ಮನೆಯಲ್ಲಿ ಮಹಿಳೆ ಸಂಬಂಧ ಕಡಿದುಕೊಳ್ಳಲು ಒಪ್ಪಿದರೂ ಯುವಕನಿಂದ ವೀಡಿಯೋ ಇಟ್ಟುಕೊಂಡು ಬೆದರಿಕೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಮಹಿಳೆಯ ಸಂಬಂಧಿಕರು ಮತ್ತೊಮ್ಮೆ ಮಾತುಕತೆ ನಡೆಸುವುದಕ್ಕೆ ಸಿಂಗ್ರಹಳ್ಳಿ ಗ್ರಾಮದ ಹೊರ ವಲಯದಲ್ಲಿ ಕರೆಸಿಕೊಂಡಿದ್ದಾರೆ. ಯುವಕ ಬಂದಾಗ ಆತನ ಕೈಕಾಲು ಕಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಬೀಸಾಡಿ ಹೋಗಿದ್ದಾರೆ ಕದ್ದು ಮುಚ್ಚಿ ಚಕ್ಕಂದ:
ಅನೈತಿಕ ಸಂಬಂಧ ಹೊಂದಿದ್ದ ಯುವಕನಿಗೆ ಮಹಿಳೆಯ ಪತಿ ವೆಂಕಟೇಶ್ ಹಾಗೂ ಮನೆಯವರು ಹಲ್ಲೆ ಮಾಡಿ ಬುದ್ಧಿ ಹೇಳಿದ್ದರು. ಜೊತೆಗೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ, ಪೊಲೀಸರು ಯುವಕನನ್ನು ಕರೆಸಿ ಬುದ್ಧಿ ಹೇಳಿದ್ದರು. ಆದರೂ ಸಂಬಂಧ ಮುಂದುವರೆಸಿದ್ದರಿಂದ ಆತನನ್ನು ಕರೆಸಿ ಪೊಲೀಸ್ ಶೈಲಿಯಲ್ಲಿ ಬುದ್ಧಿ ಕಲಿಸಿ, ಎರಡೂ ಕಡೆಯವರಿಂದ ರಾಜಿ ಮಾಡಿಸಿದ್ದರು. ಆಗ ಅನೈತಿಕ ಸಂಬಂಧ ಬಿಡುವುದು, ಹಲ್ಲೆ ಮಾಡುವುದು ಮಾಡದಂತೆ ಸೂಚನೆ ನೀಡಲಾಗಿತ್ತು.
೧ ಕಿ.ಮೀ ಓಡಿಬಂದ:
ಸಿಂಗ್ರಹಳ್ಳಿ ಗ್ರಾಮದ ಹೊರವಲಯದ ಖಾಸಗಿ ಬಡಾವಣೆಯಲ್ಲಿ ಮಾತುಕತೆಗೆ ಕರೆಸಿದ್ದ ವೇಳೆ ಆತನಿಗೆ ಮಚ್ಚು ಬೀಸಲಾಗಿದೆ. ಮಚ್ಚಿನೇಟು ತಿಂದ ಯುವಕ ಬಡಾವಣೆಯಿಂದ ಸುಮಾರು ೧ ಕಿ.ಮೀ. ದೂರದಷ್ಟು ಗ್ರಾಮದ ಕಡೆಗೆ ಓಡಿ ಬಂದಿದ್ದಾನೆ. ಆದರೆ, ಅಟ್ಟಾಡಿಸಿಕೊಂಡು ಬಂದು ಆತನ ಕೈಕಾಲು ಕಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳನ್ನು ಮಹಿಳೆಯ ಪತಿ ವೆಂಕಟೇಶ್ ಹಾಗೂ ಆತನ ಸ್ನೇಹಿತ ಕೋಳಿ ನಾಗೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳ ಸೆರೆ :
ಗ್ರಾಮದಲ್ಲಿ ಯುವಕನ ಬರ್ಬರ ಕೊಲೆ ಆಗಿರುವುದನ್ನು ನೋಡಿದ ಗ್ರಾಮಸ್ಥರು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಂತರ ಕೊಲೆಯಾದ ಯುವಕನ ಮೊಬೈಲ್ ಕರೆ ಮಾಹಿತಿ ಹಾಗೂ ಕೊನೆಯದಾಗಿ ಯಾರೊಂದಿಗೆ ಹೋಗಿದ್ದ ಎಂಬುದನ್ನು ತಿಳಿದುಕೊಂಡಿದ್ದಾರೆ. ಜೊತೆಗೆ, ಯುವಕನ ಮೇಲೆ ದ್ವೇಷ ಇರುವುದು ಮಹಿಳೆಯ ಪತಿಯಿಂದ ಎಂಬುದು ಕೂಡ ಗೊತ್ತಿತ್ತು. ಈ ಸುಳಿವು ಸಿಕ್ಕ ಬೆನ್ನಲ್ಲೇ ವಿಶ್ವನಾಥಪುರ ಠಾಣೆ ಪೊಲೀಸರು ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯವನ್ನು ಬಾಯಿಬಿಟ್ಟಿದ್ದು ಆತ ಸೇರಿ ಕೃತ್ಯದಲ್ಲಿ ಭಾಗಿಯಾದ ಮತ್ತೊಬ್ಬನನ್ನು ವಿಶ್ವನಾಥಪುರ ಪೊಲೀಸರು ಬಂಧಿಸಿದ್ದಾರೆ.