
ಭಾಲ್ಕಿ:ನ.20: ಬಸವಕಲ್ಯಾಣದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ನ.25 ಮತ್ತು 26ರಂದು ಜರುಗುವ 44ನೆಯ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ 44ನೆಯ ಶರಣ ಮತ್ತು ಅನುಭವ ಮಂಟಪ ಉತ್ಸವದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಗತ್ತಿಗೆ ಪ್ರಪ್ರಥಮ ಸಂಸತ್ತು ಪರಿಕಲ್ಪನೆ ನೀಡಿದ ಹೆಗ್ಗಳಿಕೆ ಈ ಕಲ್ಯಾಣದ ನೆಲಕ್ಕಿದೆ. ಜತೆಗೆ ಅಸ್ಪೃಶ್ಯತೆ, ಮೌಢ್ಯತೆ, ಕಂದಾಚಾರ ವಿರುದ್ಧ ಸಮಸಮಾಜಕ್ಕಾಗಿ ಬಸವಾದಿ ಶರಣರು ಹೋರಾಡಿದರು.
ಅಂತಹ ಶರಣರ ವಿಚಾರಧಾರೆ ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಪ್ರತಿವರ್ಷ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ನಡೆಸಿ ಕೊಂಡು ಬರಲಾಗುತ್ತಿದೆ.
ಹಾಗಾಗಿ ಇದೇ 25, 26 ರಂದು ಬಸವಕಲ್ಯಾಣದಲ್ಲಿ ಎರಡು ದಿವಸ ಅರ್ಥಪೂರ್ಣ ಕಾರ್ಯಕ್ರಮ ಜರುಗಲಿವೆ. ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು ಭಾಗಿಯಾಗಲಿದ್ದಾರೆ. ತಾಲೂಕಿನ ಭಕ್ತರು ಕೂಡ ಈ ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಮಂಟಪ ಉತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ದಾಡಗೆ, ಶಾಂತವೀರ ಕೇಸ್ಕರ್, ಕಾಶಿನಾಥ ಲದ್ದೆ, ಮಹಾದೇವ ಬೇಲೂರೆ, ಬಾಬುರಾವ ಬೇಲೂರೆ, ಸಂಗಮೇಶ ಟೆಂಕಾಳೆ, ಕೈಲಾಸ ಪಾಟೀಲ್, ಮಲ್ಲಿಕಾರ್ಜುನ ಗುಮ್ತಾ, ಅಮೃತ ಹೂಗಾರ, ಗೋವಿಂದ ಅಹ್ಮದಾಬಾದೆ, ಗುರುರಾಜ ಸ್ವಾಮಿ, ಬಾಲಾಜಿ ಕುಟಮಲಗೆ ಸೇರಿದಂತೆ ಹಲವರು ಇದ್ದರು.