ಮಾನ್ವಿ,ಜೂ.೧೫-
ರಾಯಚೂರು ಜಿಲ್ಲೆಯಾದ್ಯಂತ ಸ್ವಚ್ಚ ಭಾರತ ಯೋಜನೆ ೧೦% ಕಮೀಷನ್ ಪಡೆದ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಧಿಕಾರಿ ಶಶಿಕಾಂತ ಶಿವಪುರಿ ಹಾಗೂ ೧೫ ನೇ ಹಣಕಾಸು ಮತ್ತು ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಎಂಜಿಎನ್ಆರ್ಇಜಿ ಯೋಜನೆಯ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ ಮಾಡಿದ ತಾಲೂಕ ಪಂಚಾಯತಿ ಅಧಿಕಾರಿ ಎಂಡಿ ಸೈಯದ್ ಪಾಟೀಲ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಮಾಡುವಂತೆ ತಾಲೂಕ ದಲಿತ ಪರ ಸಂಘಟನೆಯ ಸಂಯುಕ್ತ ವೇದಿಕೆಯಿಂದ ಹೋರಾಟವನ್ನು ಮಾಡಲಾಯಿತು.
ಪಟ್ಟಣದ ಶಾಸಕರ ಭವನದ ಮುಂಭಾಗದಲ್ಲಿ ಹೋರಾಟ ಕೈಗೊಂಡು ಸಂಘಟನೆಯ ಮುಖಂಡ ಬಸವರಾಜ ನಕ್ಕುಂದಿ ಮಾತಾನಾಡಿ ೨೦೨೧/೨೨/೨೩/ ವರ್ಷದ ಸ್ವಚ್ಚ ಭಾರತ ಯೋಜನೆಯ ದ್ರವತ್ಯಾಜ್ಯ ನಿರ್ವಹಣೆ ಅನುಷ್ಠಾನ ಕಾಮಗಾರಿಗೆ ಒಟ್ಟು ೬.೦೩ ಕೋಟಿಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರಿ ಇವರು ೧೦% ಲಂಚವನ್ನು ಪಡೆದು ಎರಡನೇ ವ್ಯಕ್ತಿಗೆ ಕಾಮಗಾರಿಯನ್ನು ನೀಡಿರುವುದು ಕಂಡುಬಂದಿದೆ ಅದರಂತೆಯೇ ಮಾನ್ವಿ ತಾಲೂಕ ಪಂಚಾಯತ ಅಧಿಕಾರಿ ಸೈಯದ್ ಪಾಟೀಲ ಇದು ಎನ್ ಆರ್ ಇ ಜಿ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ ಮಾಡಿರುವ ಇವರ ವಿರುದ್ಧ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದ ತನಿಖಾ ತಂಡವನ್ನು ರಚನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಕೊಂಡು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿದರು.
ನಂತರ ಪ್ರಮುಖವಾಗಿ ನಕ್ಕುಂದಿ ಮೂಲಕ ಬ್ಯಾಗವಾಟ ಗ್ರಾಮಕ್ಕೆ ತೆರಳುವ ರಸ್ತೆಯನ್ನು ಕಳಪೆ ಮಾಡುವುದಕ್ಕೆ ಕಾರಣರಾದ ಗ್ರಾಮ ಪಂಚಾಯತಿ ಪಿಡಿಓ ಅಮಾನತು, ಅಮರಾವತಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ತಾಲೂಕ ಪಂಚಾಯತ ಮಳಿಗೆ ಹರಾಜು ನಡೆಸಬೇಕು, ಸಿರವಾರ ಹಾಗೂ ಮಾನ್ವಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಸೇರಿದಂತೆ ಅನೇಕ ಬೇಡಿಕೆಗಳಿಗಾಗಿ ಆಗ್ರಹಿಸಿ ಹೋರಾಟವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮುಖಂಡರಾದ ಮಾರೇಶ ಭಂಡಾರಿ, ಹನುಮಂತ ಸೀಕಲ್, ಪರಶುರಾಮ ಬಾಗಲವಾಡ, ಅಶೋಕ ತಡಕಲ್, ರವಿಕುಮಾರ್ ಮದ್ಲಾಪೂರು, ಸೇರಿದಂತೆ ಅನೇಕರು ಇದ್ದರು.