
ಬೆಂಗಳೂರು,ಏ.೧-ಐದು ದಿನಗಳ ಹಿಂದೆ ಹೊಸಕೋಟೆ ಸಮೀಪದ ಮೇಡಹಳ್ಳಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ೮ ಕಾರ್ಮಿಕರ ಪೈಕಿ ೭ ಕಾರ್ಮಿಕರು ಮೃತಪಟ್ಟಿದ್ದಾರೆ.ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಸನೋಜ್ ಶರ್ಮಾ ಅಕಾ ಸನೋದ್, ಅಮಿತ್ ಕುಮಾರ್ ಮಂಡಲ್, ಚಂದ್ರ ಪಾಲ್, ತಿಲಕ್ ರಾಮ್, ನೀರಜ್ ಭಾರತಿ, ಲಕ್ಷ್ಮಣ ಮತ್ತು ಸುಮಯಾ ಗುಪ್ತಾ ಅಲಿಯಾಸ್ ಸಮಯ್ ಶುಕ್ರವಾರದವರೆಗೆ ಒಬ್ಬರ ನಂತರ ಒಬ್ಬರು ಸಾವನ್ನಪ್ಪಿದ್ದಾರೆ. ಸುಟ್ಟು ಗಾಯಗೊಂಡಿದ್ದ ಇನ್ನೋರ್ವ ಕಾರ್ಮಿಕ ನಿಕುನ್ ಅನ್ಸಾರಿ ಮಾತ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕಳೆದ ಮಾರ್ಚ್ ೨೫ರಂದು ರಾತ್ರಿ ಶೇಡ್ನಲ್ಲಿ ಅಡುಗೆ ಮಾಡಿಕೊಂಡ ಕಾರ್ಮಿಕರು ಗಾಡ ನಿದ್ದೆಗೆ ಜಾರಿದ್ದು ಈ ವೇಳೆ ಗ್ಯಾಸ್ ಸೋರಿಕೆಯಾಗಿದೆ. ಮರುದಿನ ಮಾ.೨೬ ರ ಮುಂಜಾನೆ ಶೌಚಾಲಯಕ್ಕೆ ಹೋಗಲು ಮೇಲೆದ್ದ ಕಾರ್ಮಿಕ ಲೈಟ್ ಆನ್ ಮಾಡಿದ್ದಾನೆ.
ಶೇಡ್ ತುಂಬಾ ಗ್ಯಾಸ್ ಆವರಿಸಿದ್ದರಿಂದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು ೮ ಮಂದಿ ಕಾರ್ಮಿಕರು ಸುಟ್ಟ ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಬತ್ರೆ ಪಾಲಾಗಿದ್ದರು.ಎಲ್ಲಾ ಎಂಟು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಒಬ್ಬರಂತೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಮೃತರು ಗುತ್ತಿಗೆದಾರ ಅರವಿಂದ್ ಗುಪ್ತಾ ಎಂಬುವವರ ಬಳಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲ ಉತ್ತರ ಪ್ರದೇಶ, ಬಿಹಾರ ಮತ್ತು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ.ಕಾರ್ಮಿಕರು ವಾಸವಿದ್ದ ಮನೆಯಲ್ಲಿದ್ದ ಎಲ್ಪಿಜಿ ಗ್ಯಾಸ್ ನ ಡ್ಯಾಮೇಜ್ ಆಗಿದ್ದ ಪೈಪ್ನಿಂದ ಅನಿಲ ಸೋರಿಕೆಯಾಗಿ ಅಪಘಾತ ಸಂಭವಿಸಿದೆ ಎಂದು ತನಿಖೆಯ ಸಮಯದಲ್ಲಿ ಮಾಹಿತಿ ಸಿಕ್ಕಿದೆ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಾವು ಗುತ್ತಿಗೆದಾರ ಗುಪ್ತಾನನ್ನು ಬಂಧಿಸಿದ್ದೇವೆ ಮತ್ತು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅನೇಕ ಕಾರ್ಮಿಕರನ್ನು ಸಣ್ಣ ಕೋಣೆಯಲ್ಲಿ ಉಳಿಯಲು ಅನುಮತಿಸಿದ ಕಟ್ಟಡದ ಮಾಲೀಕ ಭಾಸ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮ. ಹೌದು ಅಂದಹಾಗೆ ಹೊಸಕೋಟೆಯ ತಿರಮಲಶೇಟ್ಟಿಹಳ್ಳಿ ಹಾಗೂ ಅನುಗೊಂಡನಹಳ್ಳೀ ಸುತ್ತಾಮುತ್ತ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನ ಕೂಲಿ ಕಾರ್ಮಿಕರು ಬರುತ್ತಿದ್ದು, ಇಲ್ಲಿಯೇ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು ಅವರ ಸುರಕ್ಷತೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.