
ಕೋಲಾರ,ಮಾ,೬- ಅಧಿಕಾರಕ್ಕಾಗಿ ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಕಳೆದ ೬೦ ವರ್ಷಗಳಲ್ಲಿ ಮುಸ್ಲಿಂ ಮಹಿಳೆಯರ ನಿರಂತರ ಶೋಷಣೆಗೆ ಸಾಥ್ ನೀಡುತ್ತಲೇ ಬಂದಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೆಹರು,ಜಿನ್ನಾ ಪ್ರಧಾನಿಯಾಗಿ ದೇಶವನ್ನು ಲೂಟಿ ಮಾಡಲು ಅಖಂಡ ಭಾರತವನ್ನು ಛಿದ್ರ ಮಾಡಿದರು ಎಂದು ಟೀಕಿಸಿ, ಇಂದು ಪಾಕಿಸ್ತಾನ ಬಿಕಾರಿಯಾಗಿದೆ ಇಂದು ಅಲ್ಲಿನ ಜನ ಮೋದಿಯಂತಹ ಪ್ರಧಾನಿ ಬೇಕು ಎಂದು ಕೂಗುತ್ತಿದ್ದಾರೆ. ಆದರೆ ಮೋದಿ ಭಾರತವನ್ನು ವಿಶ್ವಮಾನ್ಯಗೊಳಿಸಿ ಉಳಿಸಿದ್ದಾರೆ ಎಂದರು
ಮುಸ್ಲಿಂ ಹೆಣ್ಣು ಮಕ್ಕಳು ಓದಬಾರದು, ಉದ್ಯೋಗ ಮಾಡಬಾರದು ಎಂದು ಶೋಷಿಸುತ್ತಲೇ ಬಂದ ಕಾಂಗ್ರೆಸ್ಗೆ ಇದೀಗ ಬೆಂಬಲ ನೀಡುತ್ತಿರುವ ಎಸ್ಡಿಪಿಐ ತಾಕತ್ತಿದ್ದರೆ ಕೋಲಾರದಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಲಿ ಎಂದು ಸವಾಲು ಹಾಕಿದರು.
ಹೊತ್ತು,ಹೆತ್ತು ಸಾಕಿದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಒಂದೆರಡು ಮಕ್ಕಳಾಗುತ್ತಲೇ ಆಕೆಗೆ ತ್ರಿಬಲ್ ತಲಾಕ್ ನೀಡಿ ಬೀದಿಗೆ ತಳ್ಳುವ ಮೂಲಕ ತಂದೆತಾಯಿಯನ್ನು ದುಃಖಕ್ಕೆ ತಳ್ಳುವ ಸಂಸ್ಕೃತಿಯನ್ನು ಬೆಂಬಲಿಸುವ ಕಾಂಗ್ರೆಸ್ ಮತ್ತು ಎಸ್ಡಿಪಿಐ ಒಂದೇ ನಾಣ್ಯದ ಎರಡು ಮುಖಗಳಂತಿವೆ ಎಂದು ಟೀಕಿಸಿದರು.
ಮುಸ್ಲೀಂ ಹೆಣ್ಣು ಮಕ್ಕಳನ್ನು ಶೋಷಣೆಯಿಂದ ಪಾರು ಮಾಡಲು ತ್ರಿಬಲ್ ತಲಾಕ್ ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿಯವರನ್ನು ಇಂದು ಮುಸ್ಲಿಂ ಮಹಿಳೆಯರು ಬೆಂಬಲಿಸಬೇಕು ಎಂದರು.
ತಾನು ಒಂದು ಸಾರಿ ಪ್ರತಿನಿಧಿಸಿದ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ಭಯಪಡುವ ಸಿದ್ದರಾಮಯ್ಯ ಯಾವ ಸೀಮೆಯ ನಾಯಕ ಎಂದು ಪ್ರಶ್ನಿಸಿದ ಅವರು, ಅಲ್ಲಿ ಜನರಿಗಾಗಿ ಕೆಲಸ ಮಾಡದ ಅವರು ಇದೀಗ ಕೋಲಾರಕ್ಕೆ ಬರುವ ತವಕದಲ್ಲಿದ್ದಾರೆ, ಅವರನ್ನು ಇಲ್ಲಿ ಸೋಲಿಸದಿದ್ದರೆ ನಾವು ಕೋಲಾರದ ಮಕ್ಕಳೇ ಅಲ್ಲ ಎಂದು ಘೋಷಿಸಿದರು.
೫ ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಕಾರ್ಡ್, ೧೩೫ ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ, ಕಾಶ್ಮಿರದಲ್ಲಿ ೩೭೦ನೇ ವಿಧಿ ತೆಗೆದು ಅಲ್ಲಿನ ಜನತೆ ನೆಮ್ಮದಿಯಿಂದ ಜೀವಿಸಲು ನೆರವಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ೧೪೦೦ ಕೋಟಿ ವೆಚ್ಚದಲ್ಲಿ ಶುದ್ದ ನೀರಿನ ಘಟಕಗಳನ್ನು ನೀಡಿದ್ದು, ಬೀದಿಬದಿ ವ್ಯಾಪಾರಿಗಳಿಗೆ ೫೦ ಸಾವಿರ ಸಾಲ ನೀಡಿದ್ದು ಎಲ್ಲವೂ ಮೋದಿಯವರೇ ಎಂದರು.
ಅಕ್ಕಿ ಮೋದಿದು-ಚೀಲ ಸಿದ್ದರಾಮಯ್ಯದು
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಇದೊಂದು ಐತಿಹಾಸಿಕ ಸಮಾವೇಶವಾಗಿದೆ, ಉಚಿತ ಅಕ್ಕಿ ಕೊಟ್ಟಿದ್ದು ನಾನು ಎನ್ನುವ ಸಿದ್ದರಾಮಯ್ಯಗೆ ಗೊತ್ತಿರಲಿ ಅಕ್ಕಿಗೆ ೨೮ ರೂ ಕೊಟ್ಟಿದ್ದು ಮೋದಿ ಸರ್ಕಾರ, ನೀವು ಕೊಟ್ಟಿದ್ದ ಕೇವಲ ಚೀಲವಷ್ಟೆ ಎಂದು ವ್ಯಂಗ್ಯವಾಡಿದರು.
ನಾನೆಂದೂ ಮುಸ್ಲಿಮರ ಮತ ಬೇಡ ಎಂದು ಹೇಳಿಲ್ಲ, ಕೆಲವರು ನನ್ನ ವಿರುದ್ದ ಅಪಪ್ರಚಾರ ನಡೆಸಿದ್ದಾರೆ, ನನ್ನನ್ನು ಮೊದಲ ಬಾರಿ ಗೆಲ್ಲಿಸಿದ್ದೇ ಮುಸ್ಲಿಮರು ಎಂದ ಅವರು, ನಿಮ್ಮ ಮತವಿಲ್ಲದೇ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿ, ಕೋಲಾರ ಕ್ಲಾಕ್ಟವರ್ನಲ್ಲಿ ಸಂಸದರು ಹಾರಿಸದ್ದು ಭಾರತದ ಬಾವುಟ ಪಾಕ್ದ್ದಲ್ಲ ಎಂದು ತಿಳಿಸಿ, ಮೋದಿಯವರೇ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎಂದರು.
ಏಪ್ರಿಲ್ ತಿಂಗಳಲ್ಲಿ ಕೋಲಾರದಲ್ಲಿ ೧೦ ಸಾವಿರ ಮಂದಿ ಅಲ್ಪಸಂಖ್ಯಾತರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುವುದಾಗಿ ತಿಳಿಸಿದ ವರ್ತೂರು ಪ್ರಕಾಶ್, ಕೋಲಾರಕ್ಕೆ ಸಿದ್ದರಾಮಯ್ಯ ಬರಲ್ಲ, ಮೈಸೂರಿಗೆ ಹೋಗ್ತಾರೆ ಎಂದರು.
ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಬೆಗ್ಲಿ ಸಿರಾಜ್, ಸೈಯದ್ ಸಲಾಂ ಮಾತನಾಡಿ, ಈ ದೇಶದ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಿದ್ದೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಮ್ಮನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಂಡವು ಆದರೆ ನಮ್ಮ ಬಡತನ ನೀಗಲಿಲ್ಲ, ಮೋದಿ ಇದೆಲ್ಲವನ್ನು ಮೀರಿ ನಮಗೆ ನೆರವಾಗುತ್ತಿದ್ದಾರೆ ಇದನ್ನು ಅರ್ಥ ಮಾಡಿಕೊಂಡು ಬಿಜೆಪಿಯನ್ನು ಬೆಂಬಲಿಸೋಣ ಎಂದರು.
ಬಿಜೆಪಿಗೆ ಸೇರ್ಪಡೆ
ಇದೇ ಸಂದರ್ಭದಲ್ಲಿ ಸುಲ್ತಾನ್ ತಿಪ್ಪಸಂದ್ರದ ಮುಸ್ಲಿಂ ಮುಖಂಡರಾದ ರಿಜ್ವಾನ್ ಪಾಷಾ, ವೆಲ್ಡರ್ ಶಬೀರ್ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ತೇಜಸ್ ವರ್ತೂರು ಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರೇಗೌಡ, ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್,ಮಾಜಿ ಸದಸ್ಯೆ ರೂಪಶ್ರೀ, ಬಂಕ್ಮಂಜುನಾಥ್, ಸೂಲೂರು ಆಂಜಿನಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ನಗರಾಧ್ಯಕ್ಷ ಸಾಧಿಕ್ ನವೀನ್, ಮುಖಂಡರಾದ ಜಾಮೀನುಲ್ಲಾಖಾಣ್, ಜಾವಿದ್, ಮೆಹಬೂಬ್, ಮುನೀರ್, ಜಾಮೀದ್ಖಾನ್, ನಗೀನಾ ಭಾನು, ಮಮತಾ,ಸೈಯದ್ ರಿಯಾಜ್,ಎಸ್ಸಿಮೋರ್ಚಾ ವೆಂಕಟೇಶ್ ಮತ್ತಿತರರಿದ್ದರು.