ಅದ್ಧೂರಿ ಬ್ರಹ್ಮ ರಥೋತ್ಸವ

ಕೆ.ಆರ್.ಪುರ,ಮಾ.೩೧- ಶ್ರೀರಾಮನವಮಿ ಅಂಗವಾಗಿ ವೈಟ್ ಫೀಲ್ಡ್ ಸಮೀಪದ ಹಗದೂರಿನ ಪುರಾತನ ಪ್ರಸಿದ್ಧ ಶ್ರೀ ರಾಮದೇವರ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಬ್ರಹ್ಮ ರಥೋತ್ಸವಕ್ಕೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಬಗೆ ಬಗೆಯ ಹೂವಿನಿಂದ ಅಲಂಕಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೇರವಣಿಗೆ ಮಾಡಲಾಯಿತು.
ಜಾತ್ರಾ ಮಹೊತ್ಸವದಲ್ಲಿ ಹಳ್ಳಿಕಾರ್ ಎತ್ತುಗಳಿಂದ ಮೆರವಣಿಗೆ ಹಾಗೂ ಡೊಳ್ಳು ಕುಣಿತ ,ಗಾರುಡಿಗೊಂಬೆ, ವೀರಗಾಸೆ ಸೇರಿದಂತೆ ಕಲಾತಂಡಗಳ ನೃತ್ಯವು ನೆರೆದಿದ್ದವರನ್ನು ಆಕರ್ಷಿಸಿತು.
ಹಗದೂರು ಕಾಲೋನಿ, ಇಮ್ಮಡಿಹಳ್ಳಿ,ವಿನಾಯಕ ನಗರ, ಚನ್ನಸಂದ್ರ, ನಾಗೂಂಡನಹಳ್ಳಿ ಸೇರಿದಂತೆ ಹಗದೂರು ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಶ್ರೀರಾಮ ಸೇವಾ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಲಾಗಿತ್ತು.
ಈ ಸಂದರ್ಭದಲ್ಲಿ ಎಂ.ಎಲ್.ಸಿ ಗೋಪಿನಾಥ್ ರೆಡ್ಡಿ,ಮಾಜಿ ಪಾಲಿಕೆ ಸದಸ್ಯ ಹಗದೂರು ಶ್ರೀನಿವಾಸ್,ಮುಖಂಡರಾದ ವರ್ತೂರು ಶ್ರೀಧರ್,ಚನ್ನಸಂದ್ರ ಚಂದ್ರಶೇಖರ್, ಮಹೇಂದ್ರ ಮೋದಿ,ಎಲ್.ರಾಜೇಶ್, ಶ್ರೀರಾಮ ಸೇವಾ ಸಮಿತಿ ಸದಸ್ಯರು ಹಾಗೂ ಹಗದೂರು ಗ್ರಾಮಸ್ಥರು ಭಾಗವಹಿಸಿದ್ದರು.