
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರದ ಮೂಲಕ ಗೀತಾ ಶಿವರಾಜ್ ಕುಮಾರ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ್ದ ಬೆನ್ನಲ್ಲೇ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.
ಈ ಮೂಲಕ ಅಜ್ಜಿ ಪಾರ್ವತಮ್ಮ ರಾಜ್ಕುಮಾರ್ ,ಅಮ್ಮ ಗೀತಾ ಶಿವರಾಜ್ಕುಮಾರ್, ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾದಿಯಲ್ಲಿ ನಿವೇದಿತಾ ಕೂಡ ಹೆಜ್ಜೆ ಹಾಕಿದ್ದಾರೆ.
ಶ್ರೀಮುತ್ತು ಸಿನಿ ಸರ್ವಿಸ್ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಮತ್ತು ಮೂರು ವೆಬ್ ಸೀರೀಸ್ ನಿರ್ಮಾಣ ಮಾಡಿದ್ದರು. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.
ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ ಎನ್ನುವ ಸಾಲಿನೊಂದಿಗೆ ಹೊಸ ಅಧ್ಯಾಯದೊಂದಿಗೆ ಹೊಸ ಚಿತ್ರದ ಪೆÇೀಸ್ಟರ್ ಮೂಲಕ ಸದ್ಯದಲ್ಲಿಯೇ ಚಿತ್ರೀಕರಣ ಆರಂಭ ಮಾಡುವುದಾಗಿ ಪ್ರಕಟಿಸಿದ್ದಾರೆ.
ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಪುತ್ರಿಗೆ ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ. ಈ ಮೂಲಕ ನಿವೇದಿತಾ ಶಿವರಾಜ್ ಕುಮಾರ್ ಹೊಸ ಮುಖ ಮತ್ತು ಕಂಟೆಂಟ್ ಆದಾರಿತ ಚಿತ್ರಗಳಿಗೆ ಆದ್ಯತೆ ನೀಡಲು ಮುಂದಾಗಿದ್ದಾರೆ.
ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಹೊಸ ಪ್ರತಿಭೆ ವಂಶಿಗೆ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ನಟಿಸುವ ಜವಾಬ್ದಾರಿ ನೀಡಿದ್ದಾರೆ.
ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಸೆರೆಹಿಡಿಯಲಿದ್ದು, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಜಯ್ ರಾಮ್ ಸಹ ನಿರ್ದೇಶಕರಾಗಿ ಆಗಿ ಕೆಲಸ ಮಾಡುತ್ತಿದ್ದಾರೆ.
ಕಂಟೆಂಟ್ ಆಧಾರಿತ ಚಿತ್ರ
ನಿವೇದಿತಾ ಅವರಿಗೆ ವೆಬ್ ಸೀರೀಸ್ ಮಾಡುವ ಉದ್ದೇಶವಿತ್ತು. ಅವರಿಗೆ ಚಿತ್ರದ ಕಥೆ ಹೇಳಿದೆ. ಕಥೆ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಂಡು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದು ಕಂಟೆಂಟ್ ಆಧಾರಿತ ಚಿತ್ರ. ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ.
– ನಟ, ನಿರ್ದೇಶಕ ವಂಶಿ,