ಕಲಬುರಗಿ,ಅ.20-ಅಕ್ರಮವಾಗಿ ಸಾಗಿಸುತ್ತಿದ್ದ 4.8 ಲಕ್ಷ ಮೊತ್ತದ 120 ಕ್ವಿಂಟಾಲ್ ಅಕ್ಕಿ ಮತ್ತು 1.68 ಲಕ್ಷ ಮೊತ್ತದ 59 ಕ್ವಿಂಟಾಲ್ ಗೋಧಿ ಸೇರಿ 5.76 ಲಕ್ಷ ರೂ.ಮೊತ್ತದ ಅಕ್ಕಿ ಮತ್ತು ಗೋಧಿ ಹಾಗೂ 2 ಲಕ್ಷ ರೂ.ಮೌಲ್ಯದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ನಗರದ ರಾಮ ಮಂದಿರ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿ ಜಪ್ತಿ ಮಾಡಿದ್ದಾರೆ.
ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿದ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಆಹಾರ ನಿರೀಕ್ಷಕರಾದ ಭಾರತಿ ಪಾಟೀಲ ಮತ್ತು ಶ್ರೀನಿವಾಸ ಅವರು ಈ ದಾಳಿ ನಡೆಸಿದ್ದಾರೆ.
ಈ ಸಂಬಂಧ ಶಿವಶಕ್ತಿ ದಾಲ್ ಇಂಡಸ್ಟ್ರೀಸ್ ಮಾಲೀಕ ವಿಶ್ವನಾಥ ಬಿ.ಪಾಟೀಲ, ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಪ್ತಿ ಮಾಡಿರುವ ಅಕ್ಕಿ ಮತ್ತು ಗೋಧಿ ಅಫಜಲಪುರ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳಿಗೆ ಸರಬರಾಜು ಮಾಡಬೇಕಾದದ್ದು ಆಗಿದೆ ಎಂದು ತಿಳಿದುಬಂದಿದೆ.