ಅಕ್ಕಮಹಾದೇವಿ ವಚನಗಳು ಸರ್ವಕಾಲಿಕ ಸತ್ಯ

ಧಾರವಾಡ,ಏ6 :ಅಕ್ಕಮಹಾದೇವಿ ವಚನಗಳು ಸರ್ವಕಾಲಿಕ ಸತ್ಯಗಳಾಗಿವೆ. ಅಕ್ಕನ ವಚನಗಳನ್ನು ವಿಶ್ಲೇಷಿಸುತ್ತಾ ಹೋದಂತೆಲಾ ನಮ್ಮ ಲೌಕಿಕ ಜೀವನ ಹಸನಾಗುವುದು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಸಾಹಿತಿಡಾ. ಶಾಂತಾ ಇಮ್ರಾಪೂರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ವಚನ ವಿಶ್ಲೇಷಣೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಇನ್ನೋರ್ವ ಅತಿಥಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಲೇಖಕಿ ಡಾ. ವಿಜಯಾ ಗುತ್ತಲ ಮಾತನಾಡಿ, ಇಂದಿಗೂ ಸ್ತ್ರೀ ಕುಲಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ ಹೊಂದಿದಆದ್ಯ ವಚನಗಾರ್ತಿ ಅಕ್ಕಮಹಾದೇವಿ ಎಂದರು.
ಅಧ್ಯಕ್ಷತೆ ವಹಿಸಿ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಇಂದಿನ ವಚನ ವಿಶ್ಲೇಷಣೆ ಸ್ಪರ್ಧೆಯು ಸ್ತ್ರೀಯರ ಬೌದ್ಧಿಕ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರುಗಲಿ ಎಂದು ಆಶಿಸಿದರು.
ಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಜರುಗಿದ ವಚನ ವಿಶ್ಲೇಷಣೆ ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶ್ರೀಮತಿ ಪ್ರೇಮಾ ನಡಕಟ್ಟಿ ಪಡೆದರೆ, ದ್ವಿತೀಯ ಸ್ಥಾನ ಶ್ರೀಮತಿ ಮಂಜುಳಾ ಹೊಸೂರ ಮತ್ತು ಶ್ರೀಮತಿ ಸುವರ್ಣಾ ಗದಿಗೆಪ್ಪಗೌಡರ ಹಾಗೂ ತೃತೀಯ ಸ್ಥಾನವನ್ನು ಡಾ. ಸುಧಾ ಹುಲಗೂರ, ಶ್ರೀಮತಿ ರೇಖಾ ಜೋಶಿ ಮತ್ತು ಶ್ರೀಮತಿ ಸುಧಾ ಕಬ್ಬೂರ ಹಂಚಿಕೊಂಡರು. ಸಮಾಧಾನಕರ ಬಹುಮಾನ ಶ್ರೀಮತಿ ದೀಪ ಮುಂಡರಗಿ ಪಡೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರ ನೀಡಿಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.
ಮಹಿಳಾ ಮಂಟಪದ ಸಂಚಾಲಕಿ ಡಾ.ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಡಾ. ವಿ. ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶಾರದಾ ಕೌದಿ ಮತ್ತು ಶಿವಾನಂದ ಭಾವಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಆರುಷ ಮತ್ತು ಆರಾಧ್ಯ ದೊಡವಾಡ ವಚನಗಳ ಮೂಲಕ ಪ್ರಾರ್ಥಿಸಿದರು.ಡಾ. ಅರುಣಾ ಹಳ್ಳಿಕೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಡಾ.ಶ್ರೀಶೈಲ ಹುದ್ದಾರ, ಡಾ.ಡಿ.ಎಂ. ಹಿರೇಮಠ, ಸಿ.ಜಿ. ಹಿರೇಮಠ, ಎಂ.ಎಂ.ಚಿಕ್ಕಮಠ, ಶ್ರೀಶೈಲಗೌಡ ಕಮತರ, ಸೇರಿದಂತೆ ಮಹಿಳಾ ಮಂಟಪದ ಸಲಹಾ ಸಮಿತಿ ಸದಸ್ಯರು ಭಾಗವಹಿಸಿದ್ದರು.