
ಕಲಬುರಗಿ:ಮಾ.18: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಧೀರ್ ಅವರಿಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕರುನಾಡು ಕಾರ್ಮಿಕರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಸಿಂಗೆ ಹಾಗೂ ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯ ಕಾರ್ಯದರ್ಶಿ ಅನಿಲಕುಮಾರ್ ಶಹಾಪೂರ್ ಅವರು ಬೆಂಗಳೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ವ್ಯವಸ್ಥಾಪಕ ಸುಧೀರ್ ಅವರು ಕಳೆದ 9 ತಿಂಗಳಿನಿಂದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಹುದ್ದೆಯಲ್ಲಿದ್ದು, ನಿಗಮದ ಪ್ರಗತಿ ತುಂಬ ಕುಂಠಿತವಾಗಿದ್ದು, ಕಾರಣ ಜಿಲ್ಲಾ ವ್ಯವಸ್ಥಾಪಕರು ನಿಗಮದ ಅಧಿಕಾರಿ ಇಲ್ಲದ ಕಾರಣ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ತುಂಬಾ ವಿಳಂಬ ಮಾಡುತ್ತಿರುತ್ತಾರೆಂದು ಆರೋಪಿಸಿದರು.
ಜಿಲ್ಲಾ ವ್ಯವಸ್ಥಾಪಕರು ಸೌಲಭ್ಯ ನೀಡಬೇಕಾದ ಫಲಾನುಭವಿಗಳಿಗೆ ದಿನಾಲು ಕಚೇರಿಗೆ ಅಲೆದಾಡಿಸುತ್ತಿರುತ್ತಾರೆ ಹಾಗೂ ಲಂಚದ ಬೇಡಿಕೆ ಇಟ್ಟು ಲಂಚ ನೀಡದೇ ಇರುವ ಫಲಾನುಭವಿಗಳಿಗೆ ಕಡತ ವಿಲೇವಾರಿ ಮಾಡುವುದರಲ್ಲಿ ನಾಳೆ ಬಾ, ಎರಡು ದಿನ ಬಿಟ್ಟು ಬಾ ಎಂದು ಫಲಾನುಭವಿಗಳಿಗೆ ಅಲೆದಾಡಿಸುತ್ತಿರುತ್ತಾರೆ. ಆದ್ದರಿಂದ ಸದರಿಯವರು ಬೇರೆ ಇಲಾಖೆಯವರಾಗಿದ್ದು ಅವರನ್ನು ನಿಗಮದಿಂದ ವರ್ಗಾವಣೆ ಅಥವಾ ಅಮಾನತ್ತುಗೊಳಿಸಬೇಕೆಂದು ಅವರು ಕೋರಿದರು.