ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆ ಮಾಡಲು ಆಗ್ರಹ

ಕಲಬುರಗಿ,ಮೇ.9-ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆ ಆಗಿಲ್ಲ. ಈ ಕೂಡಲೇ ಹಾಲಿನ ಪುಡಿ ವಿತರಣೆ ಆರಂಭಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಗ್ರಹಿಸಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಹಾಲಿನ ಪುಡಿ ಪೂರೈಕೆ ಆಗಿಲ್ಲ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಹಾಲಿನ ಸೇವನೆಯು ಅತ್ಯವಶ್ಯಕವಾಗಿದೆ. ಸರ್ಕಾರದ ಈ ಲೋಪವು ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ 36 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಹಾಗೂ 6 ಲಕ್ಷಕ್ಕೂ ಹೆಚ್ಚು ಗರ್ಭಿಣಿ ಹಾಗೂ ಬಾಣಂತಿಯರನ್ನು ಹಾಲಿನಿಂದ ವಂಚಿತರನ್ನಾಗಿಸಿದೆ. ಈಗಾಗಲೇ ಸರ್ಕಾರವು ಅವಶ್ಯಕತೆ ಇರುವುದಕ್ಕಿಂತ 5 ಪಟ್ಟು ಕಡಿಮೆ ಹಾಲಿನ ಪುಡಿಯನ್ನು ಪೂರೈಕೆ ಮಾಡುತ್ತಿದೆ. ಮೂರರಿಂದ ಆರು ವರ್ಷದ ಒಳಗಿನ ಒಂದು ಮಗುವಿನ ಸಮರ್ಪಕ ಬೆಳವಣಿಗೆಗೆ ದಿನಕ್ಕೆ ಕನಿಷ್ಟ 450 ಮಿಲಿ ಲೀಟರ್ ಹಾಲಿನ ಅವಶ್ಯಕತೆ ಇದೆ. ಅಂದರೆ 70 ಗ್ರಾಂ ಹಾಲಿನ ಪೌಡರ್ ಬದಲಿಗೆ ಸರ್ಕಾರ ನೀಡುತ್ತಿರುವುದು 15 ಗ್ರಾಂ ಮಾತ್ರ. ಬಡತನ ಮತ್ತು ಆರ್ಥಿಕ ಬಿಕ್ಕಟಿನಿಂದಾಗಿ ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಪ್ರತಿದಿನ ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ 5000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಪೌಷ್ಟಿಕಾಂಶಗಳ ಪೂರೈಕೆಗಾಗಿ ಲಕ್ಷಾಂತರ ಕುಟುಂಬಗಳು ಅಂಗನವಾಡಿ ಕೇಂದ್ರಗಳ ಮೇಲೆ ಅವಲಂಬಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಕೃತಕವಾಗಿ ಹಾಲಿನ ಪುಡಿ ಕೊರತೆಯನ್ನು ‘ಜಾನುವಾರು ರೋಗ’ ದ ನೆಪದಲ್ಲಿ ಹುಟ್ಟು ಹಾಕುತ್ತಿದೆ. ಏಕಾಏಕಿ ಹಾಲಿನ ಪುಡಿ ಪೂರೈಕೆ ನಿಲ್ಲಿಸಿರುವುದು ಸರಿಯಲ್ಲ. ಹಾಲಿನ ಕೊರತೆಯು ಲಕ್ಷಾಂತರ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಂದು ವೇಳೆ ರಾಜ್ಯದಲ್ಲಿ ಹಾಲಿನ ಪೂರೈಕೆಯಲ್ಲಿ ಕೊರತೆ ಇದ್ದರೆ ನೆರೆ ರಾಜ್ಯಗಳ ನೆರವು ಪಡೆಯಬಹುದು. ಒಟ್ಟಾರೆ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಈ ಕೂಡಲೇ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಸಬೇಕೆಂದು ಅವರು ಆಗ್ರಹಿಸಿದ್ದಾರೆ.